ಬಳ್ಳಾರಿ: ನೂರು ಕೋಟಿ ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಬಹುದು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ವ್ಯಾಪಾರಕ್ಕಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ಕೋಟಿ ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಬಹುದು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರದಲ್ಲಿ ಸೇಡಿನ ರಾಜಕಾರಣ ನಡಿಯುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಸಂಪತ್ತನ್ನು ಮೊದಲು 8 ಕೋಟಿ ರೂ. ಅಂದರು. ಇದೀಗ 800 ಕೋಟಿ ರೂ. ಎನ್ನುತ್ತಿದ್ದಾರೆ. ಅಮಿತ್ ಶಾ ಹಾಗೂ ನಿತಿನ್ ಗಡ್ಕರಿ ಮಕ್ಕಳ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಇಲ್ಲವೇ? ದೇಶದಲ್ಲಿನ ಆರ್ಥಿಕ ಹಿಂಜರಿತ ಮರೆ ಮಾಚಲು ಡಿ.ಕೆ.ಶಿವಕುಮಾರ್ ಅವರನ್ನು ಬಲಿ ಕೊಡುತ್ತಿದ್ದಾರೆ. ವಿಚಾರಣೆಗೆ ಕೇವಲ ಎಂಟು ದಿನ ಸಾಕು. ಆದರೆ, 15 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ಇದಕ್ಕೆ ಜನತಾ ನ್ಯಾಯಾಲವೇ ಮುಂದಿನ ದಿನಗಳಲ್ಲಿ ಉತ್ತರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ. ಒಂದು ಕಡೆ ಪ್ರವಾಹ ಮತ್ತೊಂದೆಡೆ ಬರ ಇದೆ. ರಾಜ್ಯ ಸರ್ಕಾರ 38,500 ಕೋಟಿ ರೂ. ಅಂದಾಜು ನಷ್ಟ ಎಂದು ವರದಿ ಮಾಡಿದೆ. ಕೇಂದ್ರ ಸರ್ಕಾರವನ್ನು ಕೇಳಿರುವುದು 3,800 ಕೋಟಿ ರೂ. ಮಾತ್ರ. ಈ ವರೆಗೆ ಕೇವಲ 374 ಕೋಟಿ ರೂ.ಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರ 203 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಗ್ರೇಟ್ ಲೀಡರ್ ಈಶ್ವರಪ್ಪ ಸಂತ್ರಸ್ತರಿಗೆ ಹತ್ತು ಸಾವಿರ ಕೊಟ್ಟಿದ್ದೇ ಹೆಚ್ಚಾಯಿತು ಎನ್ನುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇತ್ತ ಮುಖ್ಯಮಂತ್ರಿಗಳು ನಿಧಾನವಾಗಿ ನಷ್ಟದ ವರದಿ ಮಾಡಿ ಎನ್ನುತ್ತಾರೆ. ರಾಜ್ಯದಲ್ಲಿ ಸರ್ಕಾರ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದರೂ ಪರಿಹಾರ ರಾಜ್ಯ ನಾಯಕರಿಂದ ಪರಿಹಾರ ಕೇಳಲು ಸಾಧ್ಯವಾಗಲಿಲ್ಲ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದರೆ, ನಮಗೆ ಪ್ರಧಾನಿಯನ್ನು ಭೇಟಿ ಮಾಡಿಸಿ ಎಂದು ಕೇಳಿದರೆ ಅದನ್ನೂ ಮಾಡಿಲ್ಲ. ಮಾಧ್ಯಮದವರಿಗೂ ಭೇಟಿ ಮಾಡಿಸಿಲ್ಲ. ಬಿಜೆಪಿ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.