ಕೋಲ್ಕತ್ತಾ: ಬಡವರೇ ನನ್ನ ಸ್ನೇಹಿತರು. ಹಾಗಾಗಿ ಈ ಗೆಳೆಯರಿಗಾಗಿಯೇ ನಾನು ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷದ ಪ್ರಚಾರದಲ್ಲಿ ಪ್ರಧಾನಿಗಳು ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ವಿಪಕ್ಷ ನಾಯಕರು ಗೆಳೆಯರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವನು, ನನಗೆ ಅವರ ಕಷ್ಟಗಳು ಗೊತ್ತು. ಅವರು ಹಿಂದೂಸ್ಥಾನದ ಯಾವುದೇ ಕೋಣೆಯಲ್ಲಿದ್ರೂ ಅವರೆಲ್ಲ ನನ್ನ ಗೆಳೆಯರು. ಅವರ ಕಷ್ಟ ಮತ್ತು ದುಃಖಗಳನ್ನ ಅರ್ಥ ಮಾಡಿಕೊಳ್ಳಬಲ್ಲೆ. ಹೌದು ಬಡ ಗೆಳೆಯರಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ
ಭವಾನಿಪುರದಲ್ಲಿ ನಿಲುಗಡೆಯಾಗಬೇಕಿದ್ದ ದೀದಿ ಸ್ಕೂಟಿಯು ನಂದಿಗ್ರಾಮದ ಕಡೆಗೆ ದಿಡೀರ್ ತಿರುಗಿದೆ ಅಂತ ವ್ಯಂಗ್ಯವಾಡಿದ್ರು. ಬಂಗಾಳದ ಜನರು ಬದಲಾವಣೆಯ ಬಗೆಗಿನ ಭರವಸೆಯನ್ನು ಎಂದಿಗೂ ಕಳೆದುಕೊಂಡಿಲ್ಲ. ಬಂಗಾಳಕ್ಕೆ ಶಾಂತಿ ಬೇಕಿದೆ. ಹೊಳಪಿನ ಬಂಗಾಳ, ಪ್ರಗತಿಶೀಲ ಬಂಗಾಳ ಬೇಕಾಗಿದೆ ಎಂದರು. ಇಲ್ಲಿ ಹೂಡಿಕೆ ಹೆಚ್ಚಿಸಲು, ಬಂಗಳಾದ ಸಂಸ್ಕೃತಿ ಕಾಪಾಡಲು ಹಾಗೂ ಬದಲಾವಣೆಯನ್ನು ತರುವ ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದರು. ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆಯಾದರು.
ದೀದಿ ತಿರುಗೇಟು: ಈ ಮಧ್ಯೆ, ಮೋದಿ ಮಾತಿಗೆ ಕೌಂಟರ್ ಕೊಟ್ಟಿರೋ ಮಮತಾ ಬ್ಯಾನರ್ಜಿ, ನಿಮ್ಮ ಆರೋಪಗಳ ಬಗ್ಗೆ ಮುಖಾಮುಖಿ ಚರ್ಚೆಗೆ ನಾನು ಸಿದ್ಧ. ದಿನ, ಸಮಯವನ್ನು ನೀವೇ ನಿಗದಿ ಮಾಡಿ ಅಂತ ಮೋದಿಗೆ ಸವಾಲ್ ಹಾಕಿದ್ದಾರೆ. ಅಲ್ಲದೆ ನಾವು ಗೆಲ್ತೇವೇ.. ಮೋದಿ-ಬಿಜೆಪಿಯನ್ನು ಭಾರತದಿಂದಲೇ ತೊಗಲಿಸ್ತೇವೆ. ನಮ್ಮ ತಂಟೆಗೆ ಬಂದವರು ಸರ್ವನಾಶ ಆಗ್ತಾರೆ ಅಂತ ಗುಡುಗಿದ್ದಾರೆ.