ಶಿವಮೊಗ್ಗ: ಹುಣಸೋಡು ಕ್ವಾರಿಗೆ ಕಾಟಾಚಾರದ ಭೇಟಿ ನೀಡಿದ ಸಿಎಂ ಯಡಿಯೂರಪ್ಪನವರು ಎರಡೇ ನಿಮಿಷದಲ್ಲಿ ಪರಿಶೀಲನೆ ನಡೆಸಿದರು.
ಸ್ಫೋಟಕದ ಮಾರಾಟ ಬಳಕೆ ಬಗ್ಗೆ ತನಿಖೆ ನಡೆಸಬೇಕಿದೆ. ಎಕೋ ಸೆನ್ಸಿಟೀವ್ ಝೋನ್ ಆಗಿರೋದರಿಂದ ಮರು ತನಿಖೆಗೆ ಸೂಚಿಸಿದ್ದೇನೆ. ತನಿಖೆಯ ನಂತರ ಕಠಿಣ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ. ಕ್ರಷರ್ಗಷ್ಟೇ ಅನುಮತಿ ನೀಡಿದ್ದೇವೆ. ಕಲ್ಲು ಗಣಿಗಾರಿಕೆಗೆ ಅನುಮತಿಯೇ ಕೊಟ್ಟಿಲ್ಲ. ಆದರೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತೇವೆ ಅನ್ನೋದರ ಬಗ್ಗೆ ಸಿಎಂ ಜಾಣ ಮೌನಕ್ಕೆ ಶರಣಾದರು.
ಉಲ್ಟಾ ಹೊಡೆದ ಸಿಎಂ: ಇಂದು ಬೆಳಗ್ಗೆ ಬೆಂಗಳೂರಲ್ಲಿ ಮಾತಾಡಿ, ಅಕ್ರಮ ಗಣಿಗಾರಿಕೆ ಅವಕಾಶ ಕೊಡಲ್ಲ ಅಂದಿದ್ದರು. ಮೈಸೂರಲ್ಲಿ ಉಲ್ಟಾ ಹೊಡೆದರು. ಗಣಿಗಾರಿಕೆಯನ್ನ ನಿಲ್ಲಿಸೋಕೆ ಆಗಲ್ಲ. ಯಾರಾದರೂ ಗಣಿಗಾರಿಕೆ ಮಾಡ್ತೀನಿ ಅಂದ್ರೇ ಲೈಸೆನ್ಸ್ ಇರ್ಬೇಕು. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆ ಅರ್ಜಿ ಹಾಕ್ಕೊಂಡು ಸಕ್ರಮ ಮಾಡ್ಕೊಳ್ಳಿ ಎಂದು ಆಫರ್ ನೀಡಿದರು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಅಕ್ರಮ ಸಕ್ರಮವನ್ನು ಸರ್ಕಾರ ಸಮರ್ಥಿಸಿಕೊಳ್ತಿದೆ. ಸಿಎಂ ಮಾತಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಧ್ವನಿಗೂಡಿಸಿದ್ದಾರೆ. ಕಾನೂನಿನಡಿಯಲ್ಲಿ ಗಣಿಗಾರಿಕೆ ಇರಲಿ ಎಂಬ ದೃಷ್ಟಿಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ಎಲ್ಲೆಲ್ಲಿ ಲೈಸೆನ್ಸ್ ತಗೊಂಡಿಲ್ವೋ ಅಂಥ ಕಡೆ ಲೈಸೆನ್ಸ್ ತಗೊಳ್ಳಿ ಅಂತ ಸಿಎಂ ಹೇಳಿದ್ದಾರೆ ಅಂತ ಸಮರ್ಥಿಸಿಕೊಂಡರು. ನಾಳೆ ಅಥವಾ ನಾಡಿದ್ದು ತನಿಖೆಯ ಪ್ರಾಥಮಿಕ ವರದಿ ಬರಲಿದೆ. ಹುಣಸೋಡು ಕೇಸಲ್ಲಿ ಓನರ್, ಲೈಸೆನ್ಸ್ ಪಡೆದವರ ಮೇಲೆ ಕ್ರಮ ತೆಗೆದುಕೊಳ್ತೇವೆ ಎಂದರು.