ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಗಂಗಾವತಿ ನಗರ ಹಾಗೂ ಶ್ರೀರಾಮನಗರದಲ್ಲಿ ಕಾಣಿಸುತ್ತಿವೆ. ಹಾಗಾಗಿ ಅವುಗಳನ್ನು ಕೊರೊನಾ ಹಾಟ್ ಸ್ಪಾಟ್ಗಳೆಂದು ಗುರುತಿಸಿ, ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ರು.
ಕೊಪ್ಪಳ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಾತನಾಡಿದ ಅವರು, ಗಂಗಾವತಿ ಮತ್ತು ಶ್ರೀರಾಮನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ತೆರೆದಿರುತ್ತವೆ. ಬ್ಯಾಂಕ್ ಆರಂಭಗಳ ಕುರಿತು ನಾಳೆಯೊಳಗೆ ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ. ಕೊಪ್ಪಳ ತಾಲೂಕಿನಲ್ಲಿ ಭಾಗ್ಯನಗರ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದು, ಲಾಕ್ಡೌನ್ ಮಾಡುವ ಕುರಿತು ಚರ್ಚೆ ನಡೆದಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ತಕ್ಷಣದಿಂದ 10 ಸಾವಿರ ಆಂಟಿಜೆನ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ 45 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈಗಿರುವ ಸುಮಾರು 40 ವೆಂಟಿಲೇಟರ್ಗಳ ಜೊತೆಗೆ 21 ವೆಂಟಿಲೇಟರ್ ಖರೀದಿಗೆ ಸೂಚಿಸಲಾಗಿದೆ. ಅದಕ್ಕೆ ಸುಮಾರು 91 ಲಕ್ಷ ಖರ್ಚಾಗುತ್ತದೆ. 1,343 ಹೆಲ್ತ್ ಕಿಟ್ ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಲು ನಿರ್ಧರಿಸಲಾಗಿದ್ದು, 55 ಲಕ್ಷ ಖರ್ಚಾಗುತ್ತದೆ. ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿಯಾಗಿ 30 ಮೊಬೈಲ್ ಯುನಿಟ್ ಜಿಲ್ಲಾದ್ಯಂತ ಸಂಚರಿಸಲಿವೆ. ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್ಪೋಸ್ಟ್ ಆರಂಭಿಸುತ್ತಿದ್ದೇವೆ ಎಂದು ಬಿ.ಸಿ ಪಾಟೀಲ್ ಹೇಳಿದ್ರು.