ರಾಮನಗರ: ಸ್ನೇಹಿತನನ್ನು ಬಾವಿಗೆ ನೂಕಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಈಜು ಬಾರದೆ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಘಟನೆ ಮಾಗಡಿ ತಾಲೂಕಿನ ತಗಚ್ಚಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬೂರು ಮೂಲದ ಲಕ್ಷ್ಮಿಕಾಂತ್(27) ಮೃತ ದುರ್ದೈವಿ. ಮಾಚೋಹಳ್ಳಿ ಅದೀಶ್ವರ್ ಕಂಪನಿಯಲ್ಲಿ ಎಕ್ಸ್ ಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ರಜೆ ಹಾಕಿ ಪಾರ್ಟಿ ಮುಗಿಸಿ ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಗಚ್ಚಕುಪ್ಪೆ ಬಳಿಯ ಗೊಲ್ಲರಪಾಳ್ಯ ಬಲರಾಮು ಎಂಬವರ ಕಲ್ಲು ಬಾವಿಗೆ ಈಜಾಡಲು ಮುಂದಾದರು.
ಈಜು ಬಾರದ ಲಕ್ಷ್ಮಿಕಾಂತ್ ನ ಬಾವಿಗೆ ತಳ್ಳಿ ಸ್ನೇಹಿತರು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಮೇಲೆ ಬಾರದನ್ನು ಕಂಡ ಈ 7 ಮಂದಿ ಯುವಕರು ಬಾವಿಯಿಂದ ಮೇಲೆ ಎತ್ತಲು ಪ್ರಯತ್ನಿಸಿದರು. ಆದರೆ ಬಾವಿಯ ನೀರಿನ ಪಾಚಿಗೆ ಸಿಲುಕಿ ಲಕ್ಷ್ಮಿಕಾಂತ್ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನ ಪೊಲೀಸರು ವಶಪಡೆದುಕೊಂಡಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.