ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿ (27) ಕೊಲೆಯಾಗಿದ್ದ ಯುವಕ. ಇದೀಗ ಮೈಕೋ ಲೇಔಟ್ ಠಾಣಾ ಪೊಲೀಸರು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂತೋಷ್, ಅಲೆಕ್ಸಾಂಡರ್, ವಿಜಯ್, ದಿಲೀಪ್ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ.
ಕಳೆದ ಸೋಮವಾರ ಅಂದರೆ ಆಗಸ್ಟ್ 3 ರಂದು ಮಧ್ಯರಾತ್ರಿ ಬಿಟಿಎಂ ಲೇಔಟ್ನ 2ನೇ ಹಂತದ ಎನ್.ಎಸ್.ಪಾಳ್ಯದಲ್ಲಿ ಈ ಕೊಲೆ ನಡೆದಿತ್ತು. ಮಣಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದನು. ಆದರೆ ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಕೊಲೆಯಾಗಿರುವ ಮಣಿಯ ಸಹೋದರ ಲೋಕೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳು ಹಾಗೂ ಲೋಕೇಶ್ ನಡುವೆ ಜಗಳವಾಗಿತ್ತು. ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ ಮಣಿ ತನ್ನ ತಮ್ಮನ ಪರವಾಗಿ ಜಗಳ ಮಾಡಿಕೊಂಡಿದ್ದನು. ಇದೇ ಕಾರಣದಿಂದ ಆರೋಪಿಗಳು ಮಣಿಯನ್ನ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.