ಮಂಡ್ಯ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಉದ್ದೇಶ ಈಗಾಗಲೇ ಈಡೇರಿದೆ. ಇನ್ನು ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ಈ ಪ್ರಕರಣದಲ್ಲಿ ಯಾವ ವಿಷಯವೂ ಸ್ಪಷ್ಟವಾಗಿಲ್ಲ. ಈ ಪ್ರಕರಣದ ತನಿಖೆ ಸ್ವತಂತ್ರವಾಗಿಲ್ಲ. ಅಲ್ಲಿಯೂ ನಿರ್ದೇಶಕರು, ನಿರ್ಮಾಪಕರು ಯಾರ್ಯಾರೋ ಇದ್ದಾರೆ. ಇಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಎರಡರ ಒಳ ಒಪ್ಪಂದವೂ ಇದೆ ಎಂದಿದ್ದಾರೆ.
ಸಿಡಿ ಪ್ರಕರಣದ ತನಿಖೆ ಮುಗಿಯುವವರೆಗೂ ಕಾಯಬಹುದಿತ್ತು. ಆದರೆ ತನಿಖೆಯನ್ನು ಕೆದಕುವ ಕೆಲಸವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಎರಡೂ ಕಡೆಯವರು ಏನೇನೋ ಹೇಳಿಕೆಯನ್ನು ನೀಡುತ್ತಿದ್ದಾರೆ. ಒಟ್ಟಾರೆ ಇದು ಮನೋರಂಜನಾ ಕಾರ್ಯಕ್ರಮವಾಗುತ್ತಿದೆ ಎಂದರು.
ಈ ಪ್ರಕರಣದಲ್ಲಿ ಯಾವ ಸತ್ಯವೂ ಹೊರಬರುವುದಿಲ್ಲ. ಯಾರಿಗೂ ನ್ಯಾಯ ಸಿಗುವುದಿಲ್ಲ. ಇಲ್ಲಿ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಪಡೆಯಬೇಕಾಗಿತ್ತು, ಪಡೆದಾಗಿದೆ. ಉದ್ದೇಶ ಈಡೇರಿದೆ. ಮುಂದಕ್ಕೆ ನಡೆಯುತ್ತಿರುವಂತದ್ದೆಲ್ಲ ಡ್ರಾಮಾ. ತನಿಖೆಯಾದಮೇಲೆ ಎಲ್ಲಾ ಸತ್ಯ ಹೊರ ಬರುತ್ತದೆ. ಆದರೆ ಇಲ್ಲಿ ಸತ್ಯವೇ ಹೊರ ಬರುವುದಿಲ್ಲ ಎಂದಾದರೆ ತನಿಖೆ ಯಾಕೆ ನಡೆಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹೇಳಿದರು.