ಧಾರವಾಡ: ವಿಧಾನಸಭೆ ಚುನಾವಣೆ ನಡೆಯಲು ಇನ್ನೂ ಒಂದೂ ಮುಕ್ಕಾಲು ವರ್ಷ ಬಾಕಿ ಇದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಬಹುಮತ ಬಂದವರು ಸಿಎಂ ಆಗುತ್ತಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಸಿಎಂ ಖುರ್ಚಿಗಾಗಿ ಫೈಟ್ ನಡೆಯುತ್ತಿದೆ. ಈ ಮಧ್ಯದಲ್ಲಿ ಒಬ್ಬರು ಇಣುಕುತ್ತಿದ್ದಾರೆ. ಡಾ.ಜಿ.ಪರಮೇಶ್ವರ್ ಕಷ್ಟದ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು, ಸಿಎಂ ಆಗಬೇಕು ಎನ್ನುವಾಗಲೇ ಅವರನ್ನು ಸೋಲಿಸಿದ್ದರು. ಈಗ ಇವರೂ ಮತ್ತೆ ಸಿಎಂ ಆಗುವ ಚಿಂತನೆಯಲ್ಲಿದ್ದಾರೆ ಎಂದು ಹರಿಹಾಯ್ದರು.
ನಮ್ಮಲ್ಲಿ ಪೂರ್ಣಾವಧಿಗೆ ಯಡಿಯೂರಪ್ಪನವರೇ ಸಿಎಂ, ಬಿಜೆಪಿಯವರು ಸ್ವಂತ ಕೆಲಸಗಳಿಗೆ ದೆಹಲಿಗೆ ಹೊರಟಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ, ಇದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ಮಹಾರಾಷ್ಟ್ರದ ಮಾಜಿ ಸಿಎಂಗೆ ಜಾರಕಿಹೊಳಿ ಮೊದಲಿನಿಂದಲೂ ಪರಿಚಯ. ಹೀಗಾಗಿ ಅವರು ಆಗಾಗ ಭೇಟಿಯಾಗುತ್ತಲೇ ಇರುತ್ತಾರೆ. ಅಲ್ಲದೆ ಬೆಳಗಾವಿಯಲ್ಲಿದ್ದವರಿಗೆ ಮಹಾರಾಷ್ಟ್ರದ ಸಂಪರ್ಕ ಹೆಚ್ಚು. ಬೆಳಗಾವಿ ರಾಜಕೀಯ ನಾಯಕರು ಮಹಾರಾಷ್ಟ್ರ ರಾಜಕೀಯ ನಾಯಕರನ್ನು ಭೇಟಿಯಾಗುತ್ತಾರೆ ಎಂದರು.