ತಿರುವನಂತಪುರಂ: ಸಾವನ್ನಪ್ಪಿದ ಮಗನ ನೆನಪಿನಲ್ಲಿ ಕೇರಳದ ಮೂಲದ ತಂದೆಯೊಬ್ಬರು ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾರೆ.
ಕೇರಳದ ತಿರುವನಂತಪುರಂನ ಟಿ.ಎನ್ ಕೃಷ್ಣಕುಮಾರ್ ಅವರ ಮಗ ಕಳೆದ ವರ್ಷ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದರು. ಈ ಮಗನ ನೆನಪಿನಲ್ಲಿ ಕೃಷ್ಣ ಕುಮಾರ್ ಅವರು, ದುಬೈನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಲು ತೀರ್ಮಾನ ಮಾಡಿದ್ದರು. ಹೀಗಾಗಿ ಸುಮಾರು 61 ಕೇರಳಿಗರು ಭಾರತಕ್ಕೆ ದುಬೈನಿಂದ ವಾಪಸ್ ಬರಲು ತಮ್ಮ ಸ್ವಂತ ಹಣದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮರೆದಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಖಾಸಗಿ ಸಂಸ್ಥೆಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾಗಿ ಉದ್ಯೋಗದಲ್ಲಿರುವ ಕೃಷ್ಣಕುಮಾರ್ ಅವರು, ಈ ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ನಾನು ಸಹಾಯ ಮಾಡಲು ಬಯಸುತ್ತೇನೆ. ದುಬೈನಲ್ಲಿ ಕೆಲಸ ಮಾಡುವ ನಮ್ಮ ದೇಶದ ಕೆಲವರು ಅಲ್ಲಿ ಕೆಲಸ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಇವರ ಪುತ್ರ 2019ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪುತ್ರನ ನೆನಪಿನಲ್ಲಿ ಇವರು 61 ಜನರನ್ನು 14 ಲಕ್ಷ ಖರ್ಚು ಮಾಡಿ ಇಂಡಿಯಾಗೆ ವಾಪಸ್ ಕರೆಸುತ್ತಿದ್ದಾರೆ. ಇವರು ಕೂಡ 32 ವರ್ಷ ದುಬೈನಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಇವರು ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ಇದೇ ಮೊದಲೇನಲ್ಲ, 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಾಗಲೂ ಇವರು ಧನಸಹಾಯ ಮಾಡಿದ್ದಾರೆ. ಜೊತೆಗೆ ಪ್ರತಿವರ್ಷ ಇಫ್ತಾರ್ ವೇಳೆ ಕಾರ್ಮಿಕರ ಶಿಬಿರಗಳಿಗೆ ಆಹಾರ ಕಿಟ್ ಕೂಡ ಕಳುಹಿಸಿ ಕೊಡುತ್ತಾರೆ.
1988ರಲ್ಲಿ ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾದ ಕೃಷ್ಣಕುಮಾರ್ ಅವರು, ಕೇರಳದ ವಿಜ್ಞಾನ ಮತ್ತು ಕಲಾ ಕಾಲೇಜುಗಳಿಂದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಯುಎಇಯಲ್ಲಿ ಸ್ಥಾಪಿಸಲಾದ ಸ್ವಯಂಸೇವಕ ಗುಂಪಿನ ಆಲ್ ಕೇರಳ ಕಾಲೇಜು ಅಲುಮ್ನಿ ಫ್ರಂಟ್ (ಎಕೆಸಿಎಎಫ್)ನ ಸಕ್ರಿಯ ಸದಸ್ಯರಾಗಿದ್ದಾರೆ.