– ಸಿಬ್ಬಂದಿಗೆ ಧನ್ಯವಾದದ ಜೊತೆಗೆ ಮನವಿ
ಬೆಂಗಳೂರು: ಸಾರಿಗೆ ನೌಕರರು ಹತ್ತು ಬೇಡಿಕೆಗಳನ್ನು ಇಟ್ಟಿದ್ದಾರೆ. ಇವಿಗಳಲ್ಲಿ ನಾವು 9 ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರನ್ನಾಗಿ ಮಾಡುವುದರಿಂದ ಸರ್ಕಾರಕ್ಕೆ ಬಹಳಷ್ಟು ಹಣಕಾಸಿನ ಹೊಡೆತ ಬರುತ್ತದೆ. 30 ರಿಂದ 40 ನಿಗಮಗಳಿವೆ, ಅವರೆಲ್ಲರೂ ಬೇಡಿಕೆ ಇಡುತ್ತಾರೆ. ಆಗ ಭಾರೀ ಪ್ರಮಾಣದ ಹಣಕಾಸಿನ ಹೊಡೆತ ಬಿದ್ದು ಅಭಿವೃದ್ಧಿಯು ನಿಂತು ಹೋಗುತ್ತದೆ. ಸರ್ಕಾರಿ ನೌಕರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಅವರಿಗು ನಮಗೂ ಸಂಬಂಧ ಇಲ್ಲ. ನಾವು ನಮ್ಮ ಸಾರಿಗೆ ನೌಕರರೊಂದಿಗೆ ಚರ್ಚೆ ಮಾಡುತ್ತವೆ. ಈಗಾಗಲೇ ಅನೇಕ ಕಡೆಗಳಲ್ಲಿ ಬಸ್ ಪ್ರಾರಂಭವಾಗಿವೆ. ನಮ್ಮ ಸಾರಿಗೆ ನೌಕರರು ನಮ್ಮ ಮಾತಿಗೆ ಬೆಲೆ ಕೊಟ್ಟು ಪ್ರಾರಂಭಿಸಿದ್ದಾರೆ. ಹೀಗಾಗಿ ನಾನು ಅವರಿಗೆ ಅಭಿನಂದನೆ ಹೇಳುತ್ತೇನೆ. ಯಾರ ಮಾತಿಗೂ ಕಿವಿ ಕೊಡಬೇಡಿ ನಿಮ್ಮ ಕೆಲಸವನ್ನು ನೀವು ಕಾರ್ಯಾರಂಭ ಮಾಡಿ. ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಸಾರಿಗೆ ಕಾರ್ಮಿಕರಲ್ಲಿ ಮನವಿ ಮಾಡಿದರು.
ಮುಷ್ಕರವನ್ನು ವಾಪಸ್ ಪಡೆಯಬೇಕು ಎಂದು ನಿರ್ಧಾರ ಮಾಡಿರುವುದು ನನಗೆ ಮಾಧ್ಯಮದ ಮುಖಾಂತರ ತಿಳಿಯಿತು. ಅಧಿಕೃತವಾಗಿ ಘೋಷಣೆ ಮಾಡುವವರೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಿನ್ನೆ ನಮ್ಮ ಹತ್ತಿರ ಬಂದು ವಾಪಸ್ ಪಡೆಯುತ್ತೇವೆ ಮುಷ್ಕರವನ್ನು ಎಂದು ಮಾತು ಕೊಟ್ಟು ಮತ್ತೆ ಮಾತು ಬದಲಾಯಿಸಿದ್ದಾರೆ. ನಾನು ಈ ವಿಷಯವಾಗಿ ಯಾವುದೇ ಹೇಳಿಕೆ ಕೊಡುವುದಾಗಲಿ ಅಥವಾ ಟೀಕೆ ಟಿಪ್ಪಣಿ ಮಾಡುವುದಾಗಲಿ ಮಾಡುವುದಿಲ್ಲ. 11 ಗಂಟೆಗೆ ಅವರ ನಿರ್ಧಾರವನ್ನು ಹೇಳುತ್ತೇವೆ ಎಂದು ಹೇಳಿದ್ದಾರೆ ಎಂದರು.
ಎಸ್ಮಾ ಜಾರಿ ಮಾಡುವಂತ ಸಂದರ್ಭ ಬರುವುದಿಲ್ಲ. ಈ ಬ್ರಹ್ಮಾಸ್ತ್ರವನ್ನು ನಾವು ಉಪಯೋಗಿಸುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಬಂದಿರುವುದು ರಾಜಕೀಯ ಪ್ರೇರಿತ ಎಂದು ಎಲ್ಲರಿಗೂ ಎನ್ನಿಸುತ್ತದೆ ಎಂದರು.