– ಸರ್ಕಾರದ ಬಳಿ ಬೆಡ್ಡು, ದುಡ್ಡು, ಸ್ಟಾಪ್ ಏನೂ ಇಲ್ಲ
ಆನೇಕಲ್: ಸರ್ಕಾರಕ್ಕೆ ಕ್ವಾರಂಟೈನ್ನಲ್ಲಿ ಇರುವವರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಇಂದು ಆನೇಕಲ್ ತಾಲೂಕಿನ ಕಾಡು ಜಕ್ಕನಹಳ್ಳಿಯ ಸೂರ್ಯ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಅವರು, ಒಂದಿನ ಬೆಂಗಳೂರಿಗೆ ರಾಮುಲು ಉಸ್ತುವಾರಿ ಇನ್ನೊಂದಿನ ಅಶ್ವಥ್ ನಾರಾಯಣ್ ಉಸ್ತುವಾರಿ ಮತ್ತೊಂದಿನ ಸುಧಾಕರ್ ಹಾಗೂ ಅಶೋಕ್ ನೋಡಿಕೊಳ್ಳುತ್ತಾರೆ ಅಂತಾರೆ ಇವರಲ್ಲೇ ಗೊಂದಲ ಇದೆ ಎಂದರು.
ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಬಳಿ ಕೋವಿಡ್-19 ತಡೆಗಟ್ಟಲು ಬೆಡ್ಡು, ದುಡ್ಡು, ಸ್ಟಾಪ್ ಮತ್ತು ಆಸ್ಪತ್ರೆಗಳು ಇಲ್ಲ. ಕೋವಿಡ್ ಆಸ್ಪತ್ರೆ ಕ್ವಾರಂಟೈನ್ನಲ್ಲಿರೋರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಇದು ಜವಾಬ್ದಾರಿ ಇಲ್ಲದ ಸರ್ಕಾರ ಬೇಜವಾಬ್ದಾರಿ ಉತ್ತರ ನೀಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಈ ಸರ್ಕಾರ ಮಾಧ್ಯಮಗಳಲ್ಲಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕೊರೊನಾ ಪಾಸಿಟಿವ್ ಬಂದವರು ರೋಡಿನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ರೋಗದ ಲಕ್ಷಣಗಲಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಕೇವಲ ಪ್ರಚಾರಕ್ಕಾಗಿ ಮೀಡಿಯಾ ಮುಂದೆ ಮಾತನಾಡುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ಪತ್ರೆಯ ಟಾಯ್ಲೆಟ್ ಶುಚಿಗೊಳಿಸಲು ಇವರ ಬಳಿ ಸಿಬ್ಬಂದಿಯಿಲ್ಲ ಎಂದು ಸುರೇಶ್ ಅವರು ಆರೋಪ ಮಾಡಿದ್ದಾರೆ.