– ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು
ಚಾಮರಾಜನಗರ: ಜಿಲ್ಲೆಯಲ್ಲಿ ಸಾವನ್ನಪ್ಪಿರೋದು 24 ಅಲ್ಲ, 34 ರಿಂದ 35 ಜನರು ಎಂದು ಕಾಂಗ್ರೆಸ್ ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ. ನಾನು ಸರ್ಕಾರದ ಕಾರ್ಯದರ್ಶಿ ರವಿಕುಮಾರ್ ಜೊತೆ ಮಾತನಾಡಿದ್ರೂ ಆಕ್ಸಿಜನ್ ಪೂರೈಕೆಯಾಗಿಲ್ಲ. ಒಬ್ಬರು ಮತ್ತೊಬ್ಬರನ್ನ ಕೇಳಿ ಎಂದು ಹೇಳಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ರೆ ಅವರ ವಿರುದ್ಧ ಎಫ್ಐಆರ್ ಆಗಲಿ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಶಾಸಕ ನರೇಂದ್ರ ಒತ್ತಾಯಿಸಿದ್ದಾರೆ.
ನನ್ನ ಕ್ಷೇತ್ರದವರು ಮೂರು ಜನ ಸಾವನ್ನಪ್ಪಿದ್ದಾರೆ. ಆದ್ರೆ ದಾಖಲೆಗಳಲ್ಲಿ ಒಬ್ಬರ ಹೆಸರು ಮಾತ್ರ ತೋರಿಸಲಾಗಿದೆ. ಹಾಗಾದ್ರೆ ಇನ್ನಿಬ್ಬರು ಎಲ್ಲಿ ಹೋದ್ರು ಎಂದು ಮೃತರ ಹೆಸರು ಮತ್ತು ವಿಳಾಸವನ್ನ ಬಹಿರಂಗಪಡಿಸಿದರು. ಕೆಲ ದಾಖಲೆಗಳ ಹಿಡಿದು ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ನರೇಂದ್ರ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಇಬ್ಬರ ಸುದ್ದಿಗೋಷ್ಠಿಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರವಿ ಮಧ್ಯ ಪ್ರವೇಶಿಸಿ ತಡೆದರು.
ನನ್ನ ಪ್ರಕಾರ ಆಮ್ಲಜನಕ 34 ರಿಂದ 35 ಜನ ಸಾವನ್ನಪ್ಪಿದ್ದಾರೆ. ಪ್ರತಿದಿನ ಜಿಲ್ಲಾ ಸರ್ಜನ್, ಡಿಸಿ ಜೊತೆ ಮಾತನಾಡುತ್ತಿದ್ದೇನೆ. ನಿನ್ನೆ ವೈದ್ಯಾಧಿಕಾರಿಗಳು ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಹೇಳಿದ್ರು. ಅವರಿಗೆ ಹೇಳಿದ್ರೂ ಆಕ್ಸಿಜನ್ ಬರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.
ಓರ್ವ ಶಾಸಕರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಈ ಸಾವಿಗೆ ಸರ್ಕಾರವೇ ಕಾರಣ. ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಪುಟ್ಟರಂಗಶೆಟ್ಟಿ ಒತ್ತಾಯಿಸಿದರು.