ಮಡಿಕೇರಿ: ಈ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿ ಕಂಡು ಬರುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಮಹಾಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಗಣೇಶೋತ್ಸವಕ್ಕೆ ಕೊಡಗಿನಲ್ಲಿ ಅಡ್ಡಿ ಉಂಟಾಗಿತ್ತು. ಈ ವರ್ಷವು ಪ್ರವಾಹ ಹಾಗೂ ಭೂಕುಸಿತದ ಜೊತೆಗೆ ಕೊರೊನಾ ಸಹ ಸೇರಿಕೊಂಡು ಈ ಬಾರಿ ಹಬ್ಬದ ಸಂಭ್ರಮವನ್ನು ಕಸಿದಿದೆ.
ಕೊಡಗು ಜಿಲ್ಲೆಯಲ್ಲಿ ಈ ವೇಳೆಗೆ ವಿವಿಧ ಸಂಘಟನೆಗಳು ಗಣೇಶೋತ್ಸವ ಆಚರಣೆಗೆ ತಯಾರಿ ನಡೆಸುತ್ತಿದ್ದವು. ಆದರೆ ಈ ಬಾರಿ ಅಷ್ಟು ಹೆಚ್ಚಾಗಿ ಜಿಲ್ಲೆಯಲ್ಲಿ ಸಂಭ್ರಮ ಕಾಣಿಸುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ವಿನಾಯಕ ಸೇವಾ ಸಮಿತಿಗಳು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಮಾತ್ರ ಕಂಡು ಬರುತ್ತಿದೆ.
ಮಂಜಿನ ನಗರಿ ಮಡಿಕೇರಿ ಐತಿಹಾಸಿಕ ದೇವಾಲಯದ ಶ್ರೀ ಕೋಟಿ ಮಹಾಗಣಪತಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಬಂದು ಈಡುಗಾಯಿ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.