ಮೈಸೂರು: ಸಣ್ಣದಾಗಿ ಗಲಾಟೆ ನಡೆದಿದ್ದು ನಿಜ, ಆದರೆ ದರ್ಶನ್ ಯಾರಿಗೂ ಹೊಡೆದಿಲ್ಲ. ನಮ್ಮ ಕಾರ್ಮಿಕರಿಗೆ ಬೈದಿದ್ದಾರೆ ಅಷ್ಟೇ ಎಂದು ಸಂದೇಶ್ ದಿ ಪ್ರಿನ್ಸ್ ಮಾಲೀಕ ಸಂದೇಶ್ ನಾಗರಾಜ್ ಅವರ ಪುತ್ರ ಸ್ಪಷ್ಟಪಡಿಸಿದ್ದಾರೆ.
ಹೋಟೇಲಿನಲ್ಲಿ ವೇಟರ್ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಜಗಳ ಆಗಿದ್ದು ನಿಜ, ಆದರೆ ಹೊಡೆದಿಲ್ಲ ಬೈದಿದ್ದಾರೆ ಅಷ್ಟೆ. ಅಂದು ನಾನು ಕೂಡ ಇದ್ದೆ. ಬೈಬೇಡಪ್ಪ ನಮ್ಮ ಕಾರ್ಮಿಕರಿಗೆ. ನಮಗೆ ಕೆಲಸಗಾರರು ಸಿಗುವುದಿಲ್ಲ. ನೀನು ಯಾವುದೋ ಟೆನ್ಶನ್ ನಲ್ಲಿ ನಮ್ಮವರಿಗೆ ಯಾಕೆ ಬೈತೀಯಾ ಎಂದಿದ್ದೆ. ಅದಕ್ಕೆ ಅವನು ಕೋಪ ಕೂಡ ಮಾಡಿಕೊಂಡಿದ್ದ ಎಂದರು.
ನಾವು ಶೂಟಿಂಗ್ ನಲ್ಲೂ ಜಗಳ ಆಡುತ್ತೇವೆ. ನಾನು ತಪ್ಪು ಮಾಡಿದಾಗ ಅವನು ಹೇಳುತ್ತಾನೆ, ಅವನು ತಪ್ಪು ಮಾಡಿದಾಗ ನಾನು ಹೇಳ್ತೇನೆ. ಫ್ರೆಂಡ್ ಶಿಪ್ ನಲ್ಲಿ ಇದೆಲ್ಲ ಮಾಮೂಲಿ. ಆದರೆ ಗಲಾಟೆ ಸಂಬಂಧ ತೋಟದಲ್ಲಿ ಏನೇನು ಆಗಿದೆ ಎಂದು ಗೊತ್ತಿಲ್ಲ. ನನ್ನ ಕಾರ್ಮಿಕರಿಗೆ ಏನಾದರೂ ಆದರೆ ನಾನು ಬಿಡ್ತೀನಾ ಎಂದು ಪ್ರಶ್ನಿಸಿದರು.
ಸಣ್ಣ ಮಟ್ಟಿನ ಜಗಳ ನಡೆದಿದೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಈ ಬಗ್ಗೆ ನಮ್ಮ ತಂದೆಯವರಿಗೆ ಏನೂ ಗೊತ್ತಿಲ್ಲ. ಹೋಟೆಲ್ ನಡೆಸುತ್ತಿರುವುದು ನಾನು, ಹೀಗಾಗಿ ಅವರಿಗೂ ಈ ಘಟನೆಗೂ ಸಂಬಂಧವಿಲ್ಲ ಎಂದರು. ಇದನ್ನೂ ಓದಿ: ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ
ಮೊದಲ ಬಾರಿಗೆ ಮೀಡಿಯಾ ಮುಂದೆ ಬಂದಿದ್ದೇನೆ. ಯಾಕಂದ್ರೆ ಇದನ್ನು ಹೀಗೆ ಬಿಟ್ಟರೆ ನಮ್ಮ ಹೋಟೆಲ್ ಹಾಗೂ ಹೀರೋಗೆ ಕೆಟ್ಟ ಹೆಸರು ಬರುತ್ತೆ. ಅಲ್ಲದೆ ನಮ್ಮ ಕಾರ್ಮಿಕರಿಗೂ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇಂದ್ರಜಿತ್ ಮನವಿಯಂತೆ ತನಿಖೆಗೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ: ಬೊಮ್ಮಾಯಿ
ಹೊಟ್ಟೆಪಾಡಿಗಾಗಿ ಹೋಟೆಲ್ ಮಾಡಿದ್ದೇವೆ. ಹೀಗಾಗಿ ಯಾರೇ ಅತಿಥಿಗಳು ಬಂದು ಏನೇ ಮಾತಾಡಿದ್ರೂ ನಾವು ಸಹಿಸಿಕೊಳ್ಳಬೇಕು. ಅಲ್ಲದೆ ಅವರು ಏನೇ ಬೈದ್ರೂ ಸಹಿಸಿಕೊಳ್ಳಬೇಕಾಗುತ್ತದೆ. ಹೋಟೆಲ್ ಅಂದ್ರೆ ಸರ್ವಿಸ್ ಇಂಡಸ್ಟ್ರಿ. ಒಟ್ಟಿನಲ್ಲಿ ಇಲ್ಲಿ ನಮಗೆ ಗ್ರಾಹಕರೇ ದೇವರಾಗಿರುತ್ತಾರೆ. ನಿಯಮಗಳ ಪ್ರಕಾರ ಅವರು ಏನು ಹೇಳ್ತಾರೆ ಅದನ್ನು ನಾವು ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಇದೆ. ಕಷ್ಟ ಇದೆ. ನಮಗೆ ರೂಮ್ ಗಳಿಲ್ಲ. ಇನ್ನೂ ಸಿನಿಮಾ ಥಿಯೇಟರ್ ಗಳು ಓಪನ್ ಆಗಿಲ್ಲ. ಹೀಗಾಗಿ ಅದರ ಬಗ್ಗೆ ಮಾತಾಡಬೇಕು. ನಿನ್ನೆ ಮೊನ್ನೆಯೆಲ್ಲ ಕೆಲವರು ಪಬ್ಲಿಸಿಟಿಗೋಸ್ಕರ ಏನೇನೋ ಕ್ರಿಯೆಟ್ ಮಾಡಿಕೊಂಡು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ಮೂಲಕ ಅವರವರ ಮರ್ಯಾದೆ ಅವರವರೇ ತೆಗೆದುಕೊಳ್ಳುತ್ತಾ ಇದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್