ಬೆಂಗಳೂರು: ಪ್ರವಸೋದ್ಯಮ ಸಚಿವ ಸಿ.ಟಿ.ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಶನಿವಾರ ಸಿ.ಟಿ.ರವಿ ರಾಜೀನಾಮೆ ಸಲ್ಲಿಸಿದ್ದಾರೆ. ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.
ಸಿ.ಟಿ.ರವಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ಗಾಂಧಿ ಜಯಂತಿಯಂದು ಸಿಎಂ ಯಡಿಯೂರಪ್ಪ ಸಿಗದ ಕಾರಣ ನಿನ್ನೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ಸೋಮವಾರ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿ ರಾಜೀನಾಮೆ ಬಗ್ಗೆ ಜೆಪಿ ನಡ್ಡಾಗೆ ಮಾಹಿತಿ ತಿಳಿಸಲಿದ್ದಾರೆ.
ಅಕ್ಟೋಬರ್ 5, 6ರಂದು ದೆಹಲಿಯಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದೆ. ಹೀಗಾಗಿ ಸಿ.ಟಿ.ರವಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಿ.ಟಿ ರವಿ ರಾಜೀನಾಮೆ ಸ್ವೀಕಾರ ಬಗ್ಗೆ ಸೋಮವಾರವೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಬಿಜೆಪಿಯಲ್ಲಿ ಓರ್ವ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಹೀಗಾಗಿ ಪಕ್ಷದ ಹುದ್ದೆ ನೀಡಿದರೆ ಸಚಿವ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ. ಈ ಕಾರಣಕ್ಕೆ ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.