ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ತುಂಬಿನಕೇರಿ ಕಾಯ್ದಿಟ ಅರಣ್ಯ ಪ್ರದೇಶದ ತುಂಬಿನಕೇರಿ ಸರ್ವೆ ನಂಬರ್ 176ರಲ್ಲಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಎರಡು ಶ್ರೀಗಂಧದ ಮರಗಳನ್ನ ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅಂದಾಜು 10 ಕೆ.ಜಿ ತೂಕದ 30 ಶ್ರೀಗಂಧ ತುಂಡುಗಳನ್ನ ಹಾಗೂ ಮರ ಕತ್ತರಿಸಲು ಬಳಸಲಾದ ಕೊಡಲಿ, ಬಾಯಿಗುದ್ದಲಿ, ಕಂದೀಲು ಹಾಗೂ 2 ಮೊಬೈಲ್ ಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನೆರೆಯ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪಿನ ನಿವಾಸಿಯಾಗಿರುವ ಶಬ್ಬೀರ್ ಅಹಮ್ಮದ್, ಅಮಾ ನುಲ್ಲಾ, ನೂರ್ ಜಹಾನ್ ಎಂಬವರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಬಳ್ಳಾರಿಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಎಂ. ಚಳಕಾಪುರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಮೋಹನ್ ಇವರ ಮಾರ್ಗದರ್ಶನದಲ್ಲಿ ಹಡಗಲಿ ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಕಲ್ಲಮ್ಮನವರ, ಉಪ ವಲಯ ಅರಣ್ಯ ಅಧಿಕಾರಿ ಡಿ.ವೈ ಸಾಗರ, ಅರಣ್ಯ ರಕ್ಷಕ ದುಷ್ಯಂತಗೌಡ, ಅರಣ್ಯ ವೀಕ್ಷಕ ಚಂದ್ರನಾಯ್ಕ, ಸಂತೋಷ್ ಹಾವನೂರು ಈ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.