ರಾಯಚೂರು: ನವೆಂಬರ್ ತಿಂಗಳು ಬಂದರೆ ರಾಜ್ಯದೆಲ್ಲಡೆ ಕನ್ನಡ ಕಹಳೆ ಮೊಳಗುತ್ತೆ, ಇಡೀ ತಿಂಗಳು ರಾಜ್ಯೋತ್ಸವ ಆಚರಣೆ ಮಾಡಲಾಗುತ್ತೆ. ಆದರೆ ಗಡಿನಾಡು ಕನ್ನಡಿಗರ ಸಮಸ್ಯೆಗಳಿಗೆ ಮಾತ್ರ ದಶಕಗಳೇ ಕಳೆದರು ಪರಿಹಾರ ಸಿಕ್ಕಿಲ್ಲ. ಹೀಗಾಗಿ ರಾಯಚೂರಿನ ಗಡಿಯ ತೆಲಂಗಾಣದಲ್ಲಿ ಶಾಲೆ ಸೇರಿದಂತೆ ಕನ್ನಡಿಗರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಗಡಿಯಲ್ಲಿ ಬರುವ ತೆಲಂಗಾಣದ 13 ಗ್ರಾಮಗಳಲ್ಲಿ ನಿತ್ಯದ ವ್ಯವಹಾರಿಕ ಭಾಷೆ ಈಗಲೂ ಕನ್ನಡವೇ ಆಗಿದೆ. ಇಲ್ಲಿ 13 ಕನ್ನಡ ಮಾಧ್ಯಮ ಶಾಲೆಗಳಿದ್ದು, 942 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಹತ್ತನೆ ತರಗತಿ ಮುಗಿದ ನಂತರ ಇವರು ಕನ್ನಡಕ್ಕೆ ತಿಲಾಂಜಲಿ ಹಾಡಬೇಕಿದೆ. ಕರ್ನಾಟಕದಲ್ಲಿ ಈ ವಿದ್ಯಾರ್ಥಿಗಳಿಗೆ ಓದು ಮುಂದುವರೆಸಲು ಸಾಕಷ್ಟು ತೊಡಕುಗಳಿದ್ದು, ಸರ್ಕಾರ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ತೆಲಂಗಾಣ, ಆಂಧ್ರ ಪ್ರದೇಶದ ಮೆದಕ್, ನಾರಾಯಣಪೇಟ, ಕರ್ನೂಲ್, ಮೆಹಬೂಬ್ ನಗರ ಜಿಲ್ಲೆಗಳಲ್ಲಿ ಒಟ್ಟು 24 ಸಾವಿರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.
ಇವರ ಉನ್ನತ ವ್ಯಾಸಂಗಕ್ಕೆ ರಾಜ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗುತ್ತಿಲ್ಲ. ಪಿಯುಸಿಗೆ ಸೀಟ್ ಸಿಕ್ಕರೂ ಸೌಲಭ್ಯಗಳಿಲ್ಲ. ಸಿಇಟಿ ಬರೆಯಲು ಅವಕಾಶ ಸಿಗುತ್ತಿಲ್ಲ. ಕಡ್ಡಾಯವಾಗಿ ಏಳು ವರ್ಷ ಕರ್ನಾಟಕದಲ್ಲೇ ಓದಿರಬೇಕು ಅನ್ನೋ ನಿಯಮ ಅಡ್ಡಿ ಬರುತ್ತಿದೆ. ಎಷ್ಟೇ ಹತ್ತಿರದಲ್ಲಿ ಇದ್ದರೂ ವಿದ್ಯಾರ್ಥಿಗಳಿಗೆ ಸಿಟಿ ಬಸ್ ಸೌಕರ್ಯ ಇಲ್ಲ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ತೆಲಂಗಾಣದ್ದಾಗಿರುವುದರಿಂದ ಇಲ್ಲಿ ನಡೆಯೊದಿಲ್ಲ ಎಂದು ಅಧಿಕಾರಿಗಳು ವಸತಿ ನಿಲಯಗಳಲ್ಲಿ ಅವಕಾಶ ಕೊಡುವುದಿಲ್ಲ. ವಿದ್ಯಾರ್ಥಿ ವೇತನದನ ಮಾತಂತೂ ದೂರವೇ ಉಳಿದಿದೆ. ಹೀಗಾಗಿ ಗಡಿನಾಡಲ್ಲಿ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆದೇ ಇದೆ.
2011 ರಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬೇಕು ಎಂದು ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಆದರೆ ಆನ್ ಲೈನ್ ಅರ್ಜಿ ತುಂಬಲು ಹೋದಾಗ ಗಡಿನಾಡು ಎಂದು ನಮ್ಮ ಪ್ರದೇಶಗಳನ್ನು ತೋರಿಸುತ್ತಲೇ ಇಲ್ಲ ಎಂದು ಗಡಿನಾಡು ಜನ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೃಷ್ಣ, ಇಂದುಪುರ, ಗುರ್ಜಾಲ, ತಂಗಡಗಿ ಸೇರಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳು ಈಗ ಒಂದೊಂದಾಗಿ ಮುಚ್ಚುವ ಪರಸ್ಥಿತಿಯಿದೆ. 30 ಜನ ಶಿಕ್ಷಕರು ತೆಲಂಗಾಣ ಸರ್ಕಾರದಿಂದ ನೇಮಕಗೊಂಡರು ಕೆಲಸ ಮಾಡುತ್ತಿದ್ದಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗುತ್ತಿದೆ.
ಸುಮಾರು ಹೋರಾಟಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಡಿನಾಡ ಕನ್ನಡಿಗರ ಸಮಸ್ಯೆ ಕುರಿತು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ ನೇತೃತ್ವದಲ್ಲಿ ಪ್ರತ್ಯೇಕ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾದರೂ ಉಪಯೋಗವಾಗಿಲ್ಲ.