ಮಡಿಕೇರಿ: ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಸಂಬಂಧ ಮಾಜಿ ಮೇಯರ್ ಸಂಪತ್ರಾಜ್ ಸದ್ಯದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವರು, ಈಗಾಗಲೇ ನಾಲ್ಕು ತಂಡಗಳು ಪ್ರಕರಣದ ಶೋಧನಾ ಕಾರ್ಯ ನಡೆಯುತ್ತಿದೆ. ಕೆಲವು ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನನಗೆ ವಿಶ್ವಾಸವಿದ್ದು, ಶೀಘ್ರವೇ ಅವನ ಬಂಧನ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿನಕ್ಕೊಂದು ಜಾಗ ಬದಲಿಸುತ್ತಿರುವ ಸಂಪತ್ ರಾಜ್- ಪೊಲೀಸರಿಗೆ ಸಿಗುತ್ತಿಲ್ಲ ಸುಳಿವು
ಇದೇ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಮ್ಮ ಪಕ್ಷದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಲೆಯಾಗಿತ್ತು. ನಮ್ಮ ಕಾರ್ಯಕರ್ತರ ಹತ್ಯೆಯಾಗಿದ್ದರಿಂದ ಅದನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಸಿದ್ದರಾಮಯ್ಯ ಅವರು ಹತಾಶೆಯಿಂದ ರಾಜಕೀಯ ದುರುದ್ದೇಶ ಎಂದು ಹೇಳುತ್ತಿದ್ದಾರೆ ಎಂದರು.
ಕಳೆದ ಒಂದು ದಶಕದಲ್ಲಿ ಲವ್ ಜಿಹಾದ್ ತೀವ್ರವಾಗಿದೆ. ಮದುವೆ ಮುಖಾಂತರ ಮತಾಂತರ ಮಾಡುವುದು ಸರಿಯಲ್ಲ. ಅಲಹಬಾದ್ ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ರಾಜದಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕಾನೂನು ಮಾಡಲಾಗುವುದು. ತಕ್ಷಣವೇ ಕಾನೂನು ಸಲಹೆ ಪಡೆದು ಕಾನೂನು ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೊಡಗು ಕೇರಳ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಮತ್ತೊಂದು ಆ್ಯಂಟಿ ನಕ್ಸಲ್ ಕ್ಯಾಂಪ್ ಮಾಡಲಾಗುವುದು. ಈಗಾಗಲೇ ಕೊಡಗಿನಲ್ಲಿ ಎರಡು ಕ್ಯಾಂಪ್ಗಳಿವೆ. ಮತ್ತೊಂದು ಕ್ಯಾಂಪ್ ಮಾಡಲು ಒಪ್ಪಿಗೆ ಸೂಚಿಸಿದ್ದೇನೆ. ಮತ್ತೊಂದು ಕ್ಯಾಂಪಿಗೆ ಹಣಕಾಸಿನ ನೆರವು ನೀಡಲಾಗುವುದು. ಅಲ್ಲದೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೂ ಕ್ರಮ ವಹಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.