ಮೂರು ಯಾಮಗಳಲ್ಲಿ ನಿದ್ರಿಸದೇ ಜಾಗರಣೆ ಮಾಡಿ ಲಿಂಗಸ್ಪರ್ಶವನ್ನು ಯಾರು ಮಾಡುತ್ತಾರೋ ಅಂತಹವರಿಗೆ ತ್ರಿಜನ್ಮದಲ್ಲಿ ಮಾಡಿರುವಂತಹ ಪಾಪಗಳು ಪರಿಹಾರ ಆಗುತ್ತೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಮನುಷ್ಯ ಜೀವಿ ತನ್ನ ಜೀವಿತಾವಧಿಯಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಆತ ಮಾಡಿದ ಕರ್ಮಗಳಿರುತ್ತವೆ. ಆ ಎಲ್ಲ ಕರ್ಮ(ಪಾಪ)ಗಳ ನಿವಾರಣೆಗೆ ಶಿವರಾತ್ರಿಯಂದು ಜಾಗರಣೆ ಮಾಡಿ ಲಿಂಗಸ್ಪರ್ಶ ಮಾಡುವದರಿಂದ ಕರ್ಮಾದಿಗಳೆಲ್ಲ ಪರಿಹಾರ ಆಗುತ್ತದೆ.
ಶಿವರಾತ್ರಿಯಲ್ಲಿ ಲಿಂಗಸ್ಪರ್ಶ ಮಾಡಿದ್ರೆ ಗ್ರಹದೋಷಗಳು ಪರಿಹಾರ ಆಗುತ್ತದೆ. ಎಲ್ಲೆಲ್ಲಿ ಲಿಂಗ ದರ್ಶನ ಮತ್ತು ಸ್ಪರ್ಶದ ಅವಕಾಶ ನೀಡುತ್ತಾರೆ ಅಲ್ಲಿಗೆ ತೆರಳಿ ಜಾಗರಣೆ ಮಾಡಿ ಲಿಂಗವನ್ನು ಸ್ಪರ್ಶ ಮಾಡಬೇಕು.
ಲಿಂಗಸ್ಪರ್ಶ ಮಾಡೋದು ಹೇಗೆ?
ಲಿಂಗಸ್ಪರ್ಶಕ್ಕೆ ತೆರಳುವ ಭಕ್ತರು ತಮ್ಮ ಜೊತೆಗೆ ಶುದ್ಧವಾದ ನೀರು, ಹಾಲು ಮತ್ತು ಬಿಲ್ವಪತ್ರೆಯನ್ನು ತೆಗೆದುಕೊಂಡು ಹೋಗಬೇಕು. ಮೂರು ವಸ್ತುಗಳನ್ನು ಲಿಂಗದ ಮೇಲೆ ಹಾಕಿ, ಎರಡು ಕೈಗಳಿಂದ ಲಿಂಗವನ್ನು ಮುಟ್ಟಿ ವ್ಯವಸ್ಥಿತವಾಗಿ ಪ್ರಾರ್ಥನೆ ಮಾಡಬೇಕು.
`ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿಯ ಮಂತ್ರನ್ನು ಸ್ಮರಣೆ ಮಾಡಬೇಕು. ಮನುಷ್ಯ ಮಾಡಿರುವ ಕೆಲಸ ಇರೋವರೆಗೂ, ಪರಮೇಶ್ವರ ಕೊಟ್ಟಿದ್ದು ಕೊನೆಯ ತನಕ ಎಂಬ ಮಾತಿದೆ. ಹಾಗಾಗಿ ಪರಮೇಶ್ವರನ ಕೃಪೆಗೆ ಪಾತ್ರರಾಗಲು ಶುಭ ಸೋಮವಾರ ಶಿವರಾತ್ರಿ ಬಂದಿದೆ. ಕೇವಲ ಶಿವ, ಶಿವ ಎಂದು ಜಪ ಮಾಡೋದಕ್ಕಿಂತಲೂ ವ್ಯವಸ್ಥಿತವಾಗಿ `ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಸ್ಮರಿಸೋದು ಉತ್ತಮ.
ಶಿವರಾತ್ರಿಯಂದು ಲಿಂಗಸ್ಪರ್ಶ ಮಾಡುವದರಿಂದ ಪುಣ್ಯ ಲಭಿಸುತ್ತೆ ಎಂದರೆ ತಪ್ಪಾಗುತ್ತದೆ. ನಮ್ಮ ಕೆಲಸಗಳಿಗುನವಾಗಿ ಪುಣ್ಯ ಸಿಗುತ್ತೆ ಎಂದು ಹೇಳುತ್ತಾರೆ. ಹಾಗಾಗಿ ಶಿವರಾತ್ರಿಯಂದು ಬಡಮಕ್ಕಳಿಗೆ ಅನ್ನದಾನ, ವಸ್ತ್ರದಾನ ಮಾಡುವುದು ಅಥವಾ ಅಂಧ ಮಕ್ಕಳಿಗೆ ಅಥವಾ ನಿರ್ಗತಿಕರಿಗೆ ಸಹಾಯವನ್ನು ಮಾಡಿದ್ರೆ ಪರಮೇಶ್ವರನ ಕೃಪೆಗೆ ಪಾತ್ರರಾಗಬಹುದು.