ದಾವಣಗೆರೆ: ಶಾಸಕ ಯತ್ನಾಳ್ಗೆ ಮಾಡುವುದಕ್ಕೆ ಕೆಲಸ ಇಲ್ಲ. ಅವರ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಹದಿನೇಳು ಜನಕ್ಕೆ ಮಾತ್ರವಲ್ಲ, ಎಲ್ಲರಿಗೂ ಸಿಎಂ ಅನುದಾನ ಕೊಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಉಕ್ಕಡಗಾತ್ರಿಯಲ್ಲಿ ಮಾತನಾಡಿದ ಅವರು, ಈ ಹದಿನೇಳು ಜನರು ಬರದಿದ್ದರೆ, ಇವತ್ತು ಬಿಜೆಪಿ ಸರಕಾರ ಬರುತ್ತಿರಲಿಲ್ಲ ಎಂಬುದನ್ನ ಯತ್ನಾಳ್ ಅರ್ಥ ಮಾಡಿಕೊಳ್ಳಲಿ. ಇಲ್ಲಾ ಅಂದರೆ ಇವರ ಲೆಟರ್ ಹೆಡ್ ಗಳಲ್ಲೆ ಧೂಳು ತಿನ್ನುತ್ತಿದ್ದವು. ಹದಿನೇಳು ಜನರ ತ್ಯಾಗದಿಂದ ಬಿಜೆಪಿ ಸರಕಾರ ಬಂದಿದೆ. ಸರಕಾರ ಬಂದಿರುವುದಕ್ಕೆ ಅವರು ಇಷ್ಟೆಲ್ಲ ಮಾತಾನಾಡುತ್ತಿದ್ದಾರೆ. ಅದು ಸರಿಯಲ್ಲ. ಟೀಕೆ, ಟಿಪ್ಪಣಿ ಯಾವಾಗಲೋ ಒಂದು ಬಾರಿಯಾದರೆ ಒಳ್ಳೆಯದು. ಪ್ರತಿನಿಧಿ ಟೀಕೆ ಮಾಡಿದರೆ ಏನು ಅರ್ಥ ಹೇಳಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರ ಹೋರಾಟದಿಂದ ಬಿಜೆಪಿ ಸರಕಾರ ಬಂದಿದೆ. ಸರಕಾರ ರಚನೆ ವೇಳೆ ಯಡಿಯೂರಪ್ಪ ಬಿಟ್ಟರೆ ಇವರ್ಯಾರು ಬಂದಿರಲಿಲ್ಲ. ಯಡಿಯೂರಪ್ಪ ಅವರನ್ನ ನಂಬಿಕೊಂಡು ಹದಿನೇಳು ಜನರು ಬಂದಿದ್ದೇವೆ. ಅದಕ್ಕೆ ಬಿಜೆಪಿ ಸರಕಾರ ಸುಭದ್ರವಾಗಿದೆ. ಅದನ್ನು ಯತ್ನಾಳ್ ಅವರು ಅರಿತುಕೊಳ್ಳಲಿ. ಸುಮ್ಮನೆ ನಾಲಿಗೆ ಇದೆ ಅಂತಾ ಏನೇನೋ ಮಾತನಾಡಿದರೆ ಸರಿಯಲ್ಲ. ಯತ್ನಾಳ್ ಅವರನ್ನ ಕರೆದುಕೊಂಡು ಬಂದಿದ್ದು ಕೂಡ ಯಡಿಯೂರಪ್ಪನವರೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದ್ದಾರೆ.