– ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಪೋಷಕರು
ರಾಯಚೂರು: ಲಾಕ್ಡೌನ್ ಹಿನ್ನೆಲೆ ಶಾಲೆಗಳಿಗೆ ರಜೆ ಇರುವುದರಿಂದ ಪೋಷಕರು ಮಕ್ಕಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕೂಲಿ ಕೆಲಸಕ್ಕೂ ಮಕ್ಕಳನ್ನು ಕಳುಹಿಸುತ್ತಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ಪುಟ್ಟ ಮಕ್ಕಳು ಕೃಷಿ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸ್ವತಃ ತಂದೆ ತಾಯಿಗಳೇ ಮಕ್ಕಳನ್ನು ಇತರೆ ಕೆಲಸಗಳಿಗೆ ಕರೆದೊಯ್ಯುತ್ತಿದ್ದಾರೆ. ಶಾಲೆ ಇಲ್ಲ ಹೀಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಚಿಕ್ಕ ಮಕ್ಕಳು ಹೇಳುತ್ತಿದ್ದಾರೆ.
ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿರುವುದರಿಂದ ನಗರದ ಎಪಿಎಂಸಿ ಆವರಣದಲ್ಲಿ ಕೃಷಿ ಪರಿಕರಗಳ ಮಾರಾಟ ಜೋರಾಗಿದೆ. ಹೀಗಾಗಿ ಪೋಷಕರು ವ್ಯಾಪಾರಕ್ಕೆ ಮಕ್ಕಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಬಾಲ ಕಾರ್ಮಿಕರ ತಡೆಗೆ ಸರ್ಕಾರ ಒಂದೆಡೆ ನಿರಂತರ ಪ್ರಯತ್ನ ನಡೆಸಿದ್ದರೂ, ಇದೀಗ ಪೋಷಕರು ತಮ್ಮ ಕೆಲಸಗಳಿಗೆ 14 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳನ್ನು ವ್ಯಾಪಾರಕ್ಕೆ ಕರೆದುಕೊಂಡು ಬಂದಿದ್ದು, ಆರಂಭವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳುಹಿಸುತ್ತೇವೆ ಎಂದು ಪೋಷಕರು ಹೇಳಿದ್ದಾರೆ.
ಕೆಲಸದಲ್ಲಿ ತೊಡಗಿರುವ ಇಬ್ಬರು ಮಕ್ಕಳು ಸಹ 8 ಹಾಗೂ 9ನೇ ತರಗತಿಯಲ್ಲಿ ಓದುತ್ತಿದ್ದು, ತಂದೆಗೆ ಸಹಾಯ ಮಾಡುತ್ತಿದ್ದೇವೆ. ಶಾಲೆ ಆರಂಭವಾದ ಮೇಲೆ ಹೋಗುವುದಾಗಿ ಹೇಳುತ್ತಿದ್ದಾರೆ. ಹತ್ತಿ ಬಿಡಿಸುವ ಸಂದರ್ಭದಲ್ಲೂ ಬಾಲಕಾರ್ಮಿಕರನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮೆಕ್ಯಾನಿಕ್, ವೆಲ್ಡಿಂಗ್ ಶಾಪ್, ಹೋಟೆಲ್ಗಳಲ್ಲೂ ಬಾಲ ಕಾರ್ಮಿಕರ ಬಳಕೆ ನಡೆದಿದೆ. ಶಾಲೆಗಳಿಗೆ ರಜೆ ಅನ್ನೋ ಕಾರಣಕ್ಕೆ ಮಕ್ಕಳನ್ನ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.