– ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ?
– ತನಿಖೆಯಿಂದ ಯುವಕ ಬಚಾವ್?
ಬೀದರ್: ವೈದ್ಯಕೀಯ ಶಿಕ್ಷಣವನ್ನು ಉಕ್ರೇನ್ ದೇಶದಲ್ಲಿ ಓದುತ್ತಿದ್ದ ಬೀದರ್ ಯುವಕ ಅಪಹರಣವಾಗಿರುವ ಘಟನೆ ನಡೆದಿದೆ.
ಅಪರಣವಾದ ಯುವಕನನ್ನು ಅಜಯ್ ರಾಠೋಡ್ ಆಗಿದ್ದಾನೆ. ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿಸೆಂಬರ್ 14ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ, ಜನವರಿ 16ರಂದು ಅಜಯ್ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಒಡ್ಡಿದ್ದರು. ದುಷ್ಕರ್ಮಿಗಳು ಆ ಬಳಿಕ ಅಜಯ್ನನ್ನು ಕಿರ್ಗಿಸ್ತಾನ್ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನ ಕಟ್ಟಿ ಹಾಕಿರುವ ಫೋಟೋ ಕಳಿಸಿದ್ದರು. ಈ ಬಗ್ಗೆ ಯುವಕನ ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ.
ನಂತರ ಜಿಲ್ಲಾ ಪೊಲೀಸರು, ಭಾರತ ರಾಯಭಾರಿ ಕಚೇರಿ ಅಧಿಕಾರಿಗಳ ಸಹಕಾರದಿಂದ ಉಕ್ರೇನ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿದ್ದ ಯುವಕನನ್ನು ರಕ್ಷಿಸಲಾಗಿದೆ. ಕೆಲವೇ ದಿನಗಳಲ್ಲಿ ಅಜಯ್ ಭಾರತಕ್ಕೆ ಮರಳಲಿದ್ದಾನೆ ಎಂದು ಅಧಿಕಾರಿಗಳು ಸಂಬಂಧಿಕರಿಗೆ ತಿಳಿಸಿದ್ದಾರೆ.