ಬಳ್ಳಾರಿ: ಲೋನ್ ಕೋಡುತ್ತೇವೆ ಎಂದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ವಂಚಿಸಿ 34 ಲಕ್ಷರೂಪಾಯಿ ದೋಚಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಆರೋಗ್ಯಪ್ಪ (43) ಖದೀಮರಿಂದ ಮೋಸ ಹೋಗಿರುವ ಹೆಡ್ ಕಾನ್ಸ್ಟೇಬಲ್. ಇವರು ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಂಜಯ್ ಶರ್ಮ ಎಂಬಾತ ಲೋನ್ ಕೊಡಿಸುವುದಾಗಿ ಮೋಸ ಮಾಡಿದ್ದಾನೆ.
ಲೋನ್ ಬಗ್ಗೆ ರಾಜಸ್ಥಾನದಿಂದ ಕಂಪನಿಯೊಂದರಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆ ಮಾಡಿ 50 ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು ಬಡ್ಡಿ ಮಾತ್ರ ಎಂದು ಮಾಹಿತಿ ನೀಡುತ್ತಾರೆ. ನಿಜವೆಂದು ನಂಬಿದ ಆರೋಗ್ಯಪ್ಪ, ಅವರು ಹೇಳಿದ ಹಾಗೆ ಕೇಳಿದ್ದಾರೆ. ತಮ್ಮ ಮೂಲ ದಾಖಲೆಗಳನ್ನು ವ್ಯಾಟ್ಸಪ್ ಮೂಲಕ ಆರ್ಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲ ಪ್ರತಿಗಳನ್ನು ಕಳಿಸಿದ್ದಾರೆ. ನಿಮಗೆ 50 ಲಕ್ಷ ಹೌಸ್ ಲೋನ್ ಮಂಜೂರಾಗಿದೆ. ಅದಕ್ಕೆ ಶುಲ್ಕ ಭರಿಸಬೇಕು ಎಂದು ತಿಳಿಸಿದ್ದಾರೆ. ಕಾರಣ ಮೊದಲಿಗೆ 93 ಸಾವಿರ ರೂಪಾಯಿಗಳನ್ನು ಅಡ್ವಕೇಟ್ ಮತ್ತು ಶೂರಿಟಿ ಶುಲ್ಕಕ್ಕೆ 2 ಲಕ್ಷ 50 ಸಾವಿರ, ಜಿಎಸ್ಟಿ 3 ಲಕ್ಷ 98 ಸಾವಿರ ಜೊತೆಗೆ ಇನ್ನಿತರ ಶುಲ್ಕ ಎಂದು ಒಟ್ಟು 22 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಆರ್ಟಿಜಿಎಸ್ ಮತ್ತು ನೆಫ್ಟ್ನಲ್ಲಿ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದರಂತೆ ಆರೋಗ್ಯಪ್ಪ ಹಣವನ್ನು ಕಳುಹಿಸಿದ್ದಾರೆ. ತದನಂತರ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದೆ ಬಳಿಕ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ.
ಆರೋಗ್ಯಪ್ಪ ಅವರಿಂದ ಹಂತ ಹಂತವಾಗಿ 12 ಲಕ್ಷರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಆರೋಗ್ಯಪ್ಪ ಫೋನ್ ಕರೆ ನಂಬಿ 34 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬಳ್ಳಾರಿ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.