ದಾವಣಗೆರೆ: ಲಾಕ್ಡೌನ್ನಿಂದಾಗಿ ಎಲ್ಲ ವಲಯದ ಮೇಲೂ ಪರಿಣಾಮ ಬೀರಿದ್ದು, ದೇಶದ ಆರ್ಥಿಕತೆಯೇ ಏರುಪೇರಾಗಿದೆ. ಅದೇ ರೀತಿ ಸಣ್ಣ ವ್ಯಾಪಾರಿಗಳಿಗೂ ನಷ್ಟ ಉಂಟಾಗಿದ್ದು, ಚಹಾ ಅಂಗಡಿ ಮಾಲೀಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಚುಗಾರನಹಳ್ಳಿಯ ಪ್ರಕಾಶ್(45) ಸಾವನ್ನಪ್ಪಿದ ದುರ್ದೈವಿ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ವ್ಯಕ್ತಿ ಕೆರೆಗೆ ಹಾರಿದ್ದು, 3 ಗಂಟೆ ವೇಳೆಗೆ ವಿಷಯ ತಿಳಿದಿದೆ. ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.
ಈತ ದಾವಣಗೆರೆಯ ಆರ್ ಟಿಓ ಕಚೇರಿ ಮುಂಭಾಗ ಟೀ ಶಾಪ್ ನಡೆಸುತ್ತಿದ್ದ. ಲಾಕ್ಡೌನ್ ನಿಂದಾಗಿ ಮೂರು ತಿಂಗಳಿನಿಂದ ಚಹಾ ಅಂಗಡಿಯನ್ನು ಮುಚ್ಚಿದ್ದು, ಇದರಿಂದ ತೀವ್ರ ನಷ್ಟ ಉಂಟಾಗಿದೆ. ದುಡಿಮೆ ಇಲ್ಲದ್ದಕ್ಕೆ ಪ್ರಕಾಶ್ ಸಾಲ ಮಾಡಿಕೊಂಡಿದ್ದ. ಹೀಗಾಗಿ ಬೇಸತ್ತು ಕೆರೆಗೆ ಹಾರಿದ್ದಾನೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.