ಲಾಕ್ಡೌನ್ ವಿಸ್ತರಿಸಲ್ಲ ಎಂದ ಸೋಮಶೇಖರ್
ಮಂಡ್ಯ: ಬೆಂಗಳೂರಿನಲ್ಲಿ ಲಾಕ್ಡೌನ್ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ.
ಲಾಕ್ಡೌನ್ ಕುರಿತು ನಗರದಲ್ಲಿ ಮಾತನಾಡಿದ ಅವರು, ಮುಂಬೈ, ಮದ್ರಾಸ್ ಹಾಗೂ ಇತರೆಡೆಗಳಿಂದ ಹೆಚ್ಚಿನ ಜನ ಬರ್ತಿದ್ದಾರೆ. ಹೊರಗಿಂದ ಹೆಚ್ಚು ಜನ ಬಂದಿದ್ದರಿಂದಲೇ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸಲು ಸಿಎಂ ತೀರ್ಮಾನ ತೆಗೆದುಕೊಂಡು ಸದ್ಯ ಒಂದು ವಾರಗಳ ಕಾಲ ಸರ್ಕಾರ ಲಾಕ್ಡೌನ್ ಮಾಡುವ ಆದೇಶ ನೀಡಿದ್ದಾರೆ. ಲಾಕ್ಡೌನ್ ಇನ್ನೂ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತಿಳಿಸಿದ್ದಾರೆ.
ಕೊರೊನಾ ಯಾರ ಕೈಯಲ್ಲೂ ಕಂಟ್ರೋಲ್ ಇಲ್ಲ. ದೇಶಾದ್ಯಂತ ಸೋಂಕು ವ್ಯಾಪಕವಾಗಿ ಹರಡಿದೆ. ಅದೇ ರೀತಿ ರಾಜ್ಯದಲ್ಲೂ ಹೆಚ್ಚಿದೆ. ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್ಡೌನ್ ಅವಧಿ ಹೆಚ್ಚಿಸುವ ಸಂದರ್ಭ ಬರಬಹುದು ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಎಲ್ಲೂ ಕೂಡ ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇಬ್ಬರು ಸಚಿವರು ಬೇರೆ ಬೇರೆ ಹೇಳಿಕೆ ನೀಡುವ ಮೂಲಕ ಗೊಂದಲವನ್ನುಂಟು ಮಾಡಿದ್ದಾರೆ. ಒಬ್ಬರು ಲಾಕ್ಡೌನ್ ಮುಂದುವರೆಯುತ್ತೆ ಎಂದರೆ, ಇನ್ನೊಬ್ಬರು ಇಲ್ಲ ಎನ್ನುತ್ತಿದ್ದಾರೆ. ಈ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ.
ಸಚಿವ ನಾರಾಯಣಗೌಡರ ಹೇಳಿಕೆಗೆ ಪ್ರತಿಯಾಗಿ ಸಚಿವ ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಲಾಕ್ಡೌನ್ ವಿಚಾರ ಪ್ರಸ್ತಾಪವಾಗಿಲ್ಲ. ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವುದಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಲಾಕ್ಡೌನ್ ಇಲ್ಲ. ಸೋಂಕಿತರು ಇರುವ ಕಡೆ ಸೀಲ್ಡೌನ್ ಮಾಡಬಹುದು ಅಷ್ಟೆ. ಬೆಂಗಳೂರಿನಲ್ಲಿ ಲಾಕ್ಡೌನ್ ಮುಂದುವರೆಯಲ್ಲ. ಈಗ ಎಷ್ಟು ದಿನ ಲಾಕ್ಡೌನ್ ಇದೆಯೋ ಅಷ್ಟೆ, ಲಾಕ್ಡೌನ್ ಮತ್ತೆ ಆಗುವುದಿಲ್ಲ ಎಂದಿದ್ದಾರೆ.