ದಾವಣಗೆರೆ: ಕೋವಿಡ್ ಶುರುವಾದಾಗಿನಿಂದ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಜನರಿಗಾಗಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ. ಅವರ ಕೋವಿಡ್ ಕಾರ್ಯವನ್ನು ದುಬೈ ಕನ್ನಡಿಗರೂ ಅರಿತಿದ್ದು, ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಅರ್ಪಿಸುತ್ತಿದ್ದಾರೆ.
ವೀಡಿಯೋ ಸಂದೇಶದ ಮೂಲಕ ಹೊನ್ನಾಳಿ ಹಾಗೂ ನ್ಯಾಮತಿಯ ಕೊರೊನಾ ಸೋಂಕಿತರ ಜೊತೆಗಿದ ಶಾಸಕ ರೇಣುಕಾಚಾರ್ಯರ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ದುಬೈ ಕನ್ನಡಿಗರ ಸಂಘದ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತು ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೊನಾ ಕಾಲದಲ್ಲಿ ನಿಮ್ಮ ಸೇವೆ ಅಪಾರ, ಶಾಸಕರೇ ನಿಮ್ಮಲ್ಲಿರುವ ಸಾಮಾಜಿಕ ಕಳಕಳಿ ಕಂಡು, ಕೆಲಸ, ಕಾರ್ಯಗಳನ್ನು ಮೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ನಿಸ್ವಾರ್ಥ ಸೇವೆ, ಜನರೊಂದಿಗೆ ಬೆರೆಯುವ ರೀತಿ, ನಿಮ್ಮ ಮಾತುಗಳನ್ನು ಕೇಳಿದಾಗ ಮೆಚ್ಚುಗೆಯಾಗುತ್ತದೆ. ಅವರ ನೋವು ನಿಮ್ಮದು ಎಂದು ತಿಳಿಯುವ ನಿಮ್ಮ ಗುಣ ನಿಜಕ್ಕೂ ಶ್ಲಾಘನೀಯ. ನಿಮ್ಮ ಕ್ಷೇತ್ರದ ಜನರು ಪುಣ್ಯವಂತರು ಮತ್ತು ನಿಮಗೆ ಸಹಕಾರ ನೀಡುತ್ತಿರುವ ನಿಮ್ಮ ಕುಟುಂಬದವರಿಗೂ ನಮ್ಮ ನಮಸ್ಕಾರಗಳು. ನಿಮ್ಮ ಸೇವೆ ಹೀಗೆ ಸಾಗಲಿ ಮತ್ತು ಹೆಚ್ಚಿನ ಶ್ರೇಯಸ್ಸನ್ನು ಭಗವಂತ ನೀಡಲಿ ಎಂದು ಹಾರೈಸಿದ್ದಾರೆ.
ದುಬೈ ಕನ್ನಡಿಗರ ಸಂಘದ ಉಪಾಧ್ಯಕ್ಷ ವಿನೀತ್ ಕುಮಾರ್, ಸದಸ್ಯರಾದ ದೀಪಕ್ ಸೋಮಶೇಖರ್, ಅರುಣ್ ಕುಮಾರ್, ವೆಂಕಟ್ ಕಾಮತ್ ಮತ್ತು ಶ್ರೀನಿವಾಸ್ ಅರಸ್ ಸಹ ಶುಭ ಹಾರೈಸಿದ್ದಾರೆ.