– ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆದಿದೆ. ಜಾಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸೋಮನಮರಡಿ ಗ್ರಾಮದ ಬಳಿ ಯಾವ ಭಯವಿಲ್ಲದೆ ಜೂಜುಕೋರರು ಕಾಲುವೆ ಬಳಿ, ಜಮೀನುಗಳಲ್ಲಿ ಜೂಜಾಟ ನಡೆಸಿದ್ದಾರೆ. ಇಸ್ಪೀಟ್ ಜೂಜಾಟಕ್ಕೆ ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಜನ ಬರುತ್ತಾರೆ.
ಜೂಜಾಟಕ್ಕೆ ಬರುವವರಲ್ಲಿ ಹೆಚ್ಚಿನವರು ರೈತರೇ ಇದ್ದಾರೆ. ಆಟಕ್ಕೆ ಪ್ರತಿಯೊಬ್ಬರು ಸಾವಿರಾರು ರೂಪಾಯಿ ತೊಡಗಿಸುವುದರಿಂದ ಲಕ್ಷಾಂತರ ರೂಪಾಯಿ ಜೂಜಾಟವೇ ನಡೆಯುತ್ತಿದೆ. ಮುಂಗಾರು ಆರಂಭವಾಗಿದ್ದು ಜಮೀನು ಕೆಲಸದಲ್ಲಿ ತೊಡಗಬೇಕಾದವರು ಜೂಜಾಟದಲ್ಲಿ ಮುಳುಗಿದ್ದಾರೆ. ಇನ್ನೂ ಇಸ್ಪೇಟ್ ಜೊತೆ ಮಟ್ಕಾ ಹಾವಳಿಯೂ ಹೆಚ್ಚಾಗಿದ್ದು ಕೂಲಿ ಕಾರ್ಮಿಕರು ,ಬಡಜನರು ಹಣದ ಆಸೆಗಾಗಿ ಮಟ್ಕಾ ಸಂಖ್ಯೆ ಬರೆಸುತ್ತಾರೆ. ಆದ್ರೆ ಇದರಿಂದ ಗ್ರಾಮದ ಬಡಜನರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದ ಎನ್.ಆರ್.ಬಿ.ಸಿ ಕಾಲುವೆ ಪಕ್ಕದಲ್ಲಿ ದಿನಾಲು ಇಸ್ಪೀಟ್ ಆಟ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.