ನವದೆಹಲಿ: ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯನಾಯ್ಡು ಉಪ ಸಭಾಪತಿಗಳ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಕರ್ನಾಟಕ ವಿಧಾನಸಭೆಯಿಂದ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಡಾ. ಎಲ್. ಹನುಮಂತಯ್ಯಗೆ ಅವಕಾಶ ನೀಡಲಾಗಿದೆ.
ಡಾ. ಎಲ್. ಹನುಮಂತಯ್ಯ ಜೊತೆಗೆ ಎನ್ಸಿಪಿಯಿಂದ ವಂದನಾ ಚವಾಣ್, ತೃಣಮೂಲ ಕಾಂಗ್ರೆಸ್ ನಿಂದ ಸುಖೇಂಡು ಶೇಖರ್ ರೇ ಮತ್ತು ಬಿಜು ಜನತಾದಳದ ಸಸ್ಮಿತ್ ಪತ್ರ, ಭಾರತೀಯ ಜನತಾ ಪಕ್ಷದಿಂದ ಭುವನೇಶ್ವರ ಕಲಿತಾ ಮತ್ತು ಸುರೇಂದ್ರ ಸಿಂಗ್ ನಗರ ಅವರನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮಿತಿಯ ಇತರೆ ಉಪಾಧ್ಯಕ್ಷರಲ್ಲಿ ಒಬ್ಬರು ಸದನದ ಅಧ್ಯಕ್ಷತೆ ವಹಿಸಿ ಕಲಾಪಗಳನ್ನು ನಡೆಸುತ್ತಾರೆ. ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ, ಅಧ್ಯಕ್ಷರು ಸಾಮಾನ್ಯವಾಗಿ ರಾಜ್ಯಸಭೆಯ ವಿವಿಧ ಪಕ್ಷಗಳ ಬಲವನ್ನು ಪರಿಗಣಿಸುತ್ತಾರೆ ಮತ್ತು ಅವರ ನಾಯಕರನ್ನು ಸಹ ಸಂಪರ್ಕಿಸಿ ಒಪ್ಪಿಗೆ ಪಡೆಯಲಾಗಿರುತ್ತದೆ.