– ಉಡುಪಿಯಲ್ಲಿ ಬರೋಬ್ಬರಿ 210, ತುಮಕೂರು 126
ಬೆಂಗಳೂರು: ಸತತ 2ನೇ ದಿನವೂ ಕೊರೊನಾ ಸೋಂಕಿತರ ಸಂಖ್ಯೆ ಎರಡೂವರೆ ಸಾವಿರ ದಾಟಿದ್ದು, ಇಂದು 2,566 ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 13 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು ಬರೋಬ್ಬರಿ 2,566 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 1,490 ಕೇಸ್ ಪತ್ತೆಯಾಗಿವೆ. ಸಿಲಿಕಾನ್ ಸಿಟಿಯಲ್ಲಿ 3 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 174 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ 55, ಕಲಬುರಗಿ 17, ಬೀದರ್, ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ 12 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,553ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಒಟ್ಟು ಸಂಖ್ಯೆ 9,81,044ಕ್ಕೆ ಏರಿಕೆಯಾಗಿದೆ. ಇಂದು 1,207 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.28ರಷ್ಟು ಮತ್ತು ಮರಣ ಪ್ರಮಾಣ ಶೇ.0.50ರಷ್ಟಿದೆ. ಬೆಂಗಳೂರು ನಗರದ ಬಳಿಕ ಉಡುಪಿಯಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇಂದು ಒಟ್ಟು 72,965 ಜನರಿಗೆ ಲಸಿಕೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಸ್ಫೋಟವಾಗಿದ್ದು, 210 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 184 ಮಂದಿ ಮಣಿಪಾಲದ ಎಂಐಟಿ ಕ್ಯಾಂಪಸ್ ನವರಾಗಿದ್ದು, ಮಣಿಪಾಲದಲ್ಲಿ ಈವರೆಗೆ 706 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕಂಟೈನ್ಮೆಂಟ್ ಜೋನಲ್ಲಿರುವ ಎಲ್ಲರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಎಂಐಟಿ ಕ್ಯಾಂಪಸ್ ನಲ್ಲಿ ಶೇ.20 ಪಾಸಿಟಿವಿಟಿ ರೇಟ್ ಇದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಂದ ಮಣಿಪಾಲ್ ಕ್ಯಾಂಪಸ್ನಲ್ಲಿ ಸೋಂಕು ಹರಡುತ್ತಿದೆ ಎನ್ನಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 9, ಬಳ್ಳಾರಿ 27, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು ನಗರ 1,490, ಬೀದರ್ 65, ಚಾಮರಾಜನಗರ 1, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 6, ಚಿತ್ರದುರ್ಗ 20, ದಕ್ಷಿಣ ಕನ್ನಡ 72, ದಾವಣಗೆರೆ 6, ಧಾರವಾಡ 31, ಗದಗ 14, ಹಾಸನ 32, ಹಾವೇರಿ 5, ಕಲಬುರಗಿ 109, ಕೊಡಗು 6, ಕೋಲಾರ 45, ಕೊಪ್ಪಳ 6, ಮಂಡ್ಯ 34, ಮೈಸೂರು 67, ರಾಯಚೂರು 12, ರಾಮನಗರ 1, ಶಿವಮೊಗ್ಗ 14, ತುಮಕೂರು 126, ಉಡುಪಿ 210, ಉತ್ತರ ಕನ್ನಡ 13, ವಿಜಯಪುರ 36 ಮತ್ತು ಯಾದಗಿರಿಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.