ಜೈಪುರ: ರಾಜಸ್ಥಾನವು ಸುಮಾರು 11.5 ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ವ್ಯರ್ಥ ಮಾಡಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗಂಭೀರ ಆರೋಪ ಮಾಡಿದ್ದಾರೆ.
ಲಸಿಕೆಯ ಶೀಷೆಯನ್ನು ಕಸದ ರಾಶಿಗೆ ಎಸೆಯಲಾಗುತ್ತಿದೆ ಎಂಬ ವರದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಸ್ಥಾನವು ಕೇರಳವನ್ನು ನೋಡಿ ಕಲಿಯಬೇಕು. ಕೇರಳದಲ್ಲಿ ಕೆಲವೇ ಪ್ರಮಾಣದ ಶೀಷೆಗಳು ವ್ಯರ್ಥವಾಗುತ್ತಿದೆ ಎಂದು ಹೇಳಿದ್ದಾರೆ.
18 ವರ್ಷ ಮೇಲ್ಟಟ್ಟವರಿಗೆ ಲಸಿಕೆ ನೀಡಲು ತಾನಾಗಿಯೇ ಅನುಮತಿ ಕೋರಿದ್ದ ರಾಜಸ್ಥಾನ ಸರ್ಕಾರ ಜಾಗತಿಕ ಟೆಂಡರ್ ಕರೆಯಲು ಮುಂದಾಗಿತ್ತು. ಈ ಪ್ರಯತ್ನ ಯಶಸ್ವಿಯಾಗದೇ ಇದ್ದಾಗ ಕೇಂದ್ರದ ವಿರುದ್ಧ ಆರೋಪ ಮಾಡತೊಡಗಿತು ಎಂದು ಗಜೇಂದ್ರ ಸಿಂಗ್ ಶೇಖಾವತ್ ದೂರಿದ್ದಾರೆ.
ಸದ್ಯ ಲಸಿಕೆಗಳು ವ್ಯರ್ಥವಾಗುತ್ತಿದೆ ಎಂಬ ಮಾಧ್ಯಮದ ವರದಿಯನ್ನು ರಾಜಸ್ಥಾನ ವೈದ್ಯಕೀಯ ಮತ್ತು ಆರೋಗ್ಯ ಪ್ರಧಾನ ಕಾರ್ಯದರ್ಶಿ ಅಖಿಲ್ ಅರೋರಾ ನಿರಾಕರಿಸಿದ್ದಾರೆ. ಲಸಿಕೆ ನೀಡುತ್ತಿರುವ ಸ್ಥಳಗಳಲ್ಲಿ ಲೆಕ್ಕ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ. ಇದನ್ನು ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ
ರಾಜಸ್ಥಾನದಲ್ಲಿ ಲಸಿಕೆಯ ವ್ಯರ್ಥ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇದೆ. ದೇಶದ ಒಟ್ಟಾರೆ ಲಸಿಕೆಯ ವ್ಯರ್ಥ ಪ್ರಮಾಣ ಶೇ.6ರಷ್ಟಿದೆ ಎಂದು ಅಖಿಲ್ ಅರೋರಾ ಹೇಳಿದ್ದಾರೆ.