ತಿರುವನಂತಪುರಂ: ರಾಜಕೀಯಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ಬಿಡುತ್ತೇನೆ ಎಂದು ರಾಜಕಾರಣಿ, Makkal Needhi Maiam ಪಕ್ಷದ ಸ್ಥಾಪಕ ಕಮಲ ಹಾಸನ್ ಅಚ್ಚರಿಯ ಹೇಳಿಕೆ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಜನಸೇವೆಯ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಂಡಿರುವ ರಾಜಕೀಯಕ್ಕೆ ಸಿನಿಮಾಗಳು ಅಡ್ಡಿಯಾಗುವುದಾದರೆ, ಈಗ ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳ ಯೋಜನೆಗಳನ್ನೂ ಪೂರ್ಣಗೊಳಿಸಿ ಸಿನಿಮಾ ಕ್ಷೇತ್ರವನ್ನು ತೊರೆಯುತ್ತೇನೆ ಎಂದು ಹೇಳಿದ್ದಾರೆ.
ತಾವು ಈವರೆಗೂ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಶೇ.30 ರಷ್ಟು ಮಂದಿಯ ಪೈಕಿ ಇದ್ದ ಕಾರಣ ತಮ್ಮ ರಾಜಕೀಯ ಪ್ರವೇಶ ಐತಿಹಾಸಿಕವಾದುದ್ದಾಗಿದೆ. ಮಾಜಿ ಸಿಎಂ ಎಂಜಿಆರ್ ತಮ್ಮ ಆದರ್ಶಗಳನ್ನು, ಜನಸೇವೆಯ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಶಾಸಕರಾದ ನಂತರವೂ ನಟನೆ ಮುಂದುವರಿಸಿದ್ದರು. ಆದರೆ ನಾನು ಸಿನಿಮಾ ರಾಜಕಾರಣಕ್ಕೆ ಅಡ್ಡಿಯಾಗುವುದಾದರೆ ಜನ ಸೇವೆಗಾಗಿ ಸಿನಿಮಾವನ್ನೂ ಬಿಡುತ್ತೇನೆ ಎಂದಿದ್ದಾರೆ.
ರಾಜಕಾರಣದಲ್ಲಿ ನನ್ನ ಜೊತೆಗಿರುವವರೂ ಸಹ ನಾನು ರಾಜಕಾರಣ ಬಿಟ್ಟು ಸಿನಿಮಾಗೆ ಹೋಗುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ನೋಡೋಣ ಯಾರು ಕಣ್ಮರೆಯಾಗುತ್ತಾರೆ ಎಂಬುದನ್ನು ಜನರು ನಿರ್ಧರಿಸಬೇಕಿದೆ ಎಂದು ಕಮಲಹಾಸನ್ ಹೇಳಿದ್ದಾರೆ. ರಾಜಕೀಯದಲ್ಲಿ ಮುಂದುವರಿಯಲು ಸಿನಿಮಾ ಬಿಡಲು ನಿರ್ಧರಿಸಿರುವ ಕಮಲ್ ಹಾಸನ್ ಅವರ ನಿರ್ಧಾರವನಮ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.