ಆಡಿಯೋಗೂ ನಮಗೂ ಯಾವುದೇ ಸಂಬಂಧವಿಲ್ಲ – ತನಿಖೆಗೆ ಆಗ್ರಹಿಸಿ ಆಸ್ಪತ್ರೆಯಿಂದ ದೂರು ದಾಖಲು

Public TV
2 Min Read
BJP Ravi Subramanya

– ವೈರಲ್ ಮಾಡಿದವರ ವಿರುದ್ಧ ಕೇಸ್ ದಾಖಲಿಸಿ

ಬೆಂಗಳೂರು: ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರಿಗೆ ಕೊರೊನಾ ವ್ಯಾಕ್ಸಿನ್ ಕಮಿಷನ್ ನೀಡಲಾಗುತ್ತಿದೆ ಎಂಬ ಆರೋಪ ಇರುವ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎ.ವಿ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ರಾಜೇಶ್ ಮೂರ್ತಿ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಡಿಯೋಗೂ ನಮಗೂ ಸಂಬಂಧವಿಲ್ಲ. ವಿನಾ: ಕಾರಣ ನಮ್ಮ ಆಸ್ಪತ್ರೆ ಬಗ್ಗೆ ಸುಳ್ಳು ವಂದತಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

Ravi Subramanya HOSPITAL medium

ಆಡಿಯೋದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ನಮ್ಮ ಆಸ್ಪತ್ರೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆಡಿಯೋಗೂ ಹಾಗೂ ಶಾಸಕ ರವಿಸುಬ್ರಮಣ್ಯ ಅವರಿಗೂ ಸಂಬಂಧವಿಲ್ಲ. ಆಡಿಯೋದಲ್ಲಿ ಮಾತನಾಡಿದ ಮಹಿಳೆ ಅಂತಾ ಯಾರು ಪತ್ತೆ ಮಾಡಿ, ಸತ್ಯಾಸತ್ಯತೆ ಹೊರ ತರುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ನಾವು ಯಾವುದೇ ರೀತಿಯ ಕಮಿಷನ್ ಶಾಸಕರಿಗೆ ನೀಡುತ್ತಿಲ್ಲ. ಸುಳ್ಳು ಸುದ್ದಿ ಎಲ್ಲಾ ಕಡೆ ವೈರಲ್ ಆಗಿದೆ. ಆಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ದೂರು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ವ್ಯಾಕ್ಸಿನ್ ಬೇಕು ಎಂದು ಆಸ್ಪತ್ರೆಗೆ ಕರೆ ಮಾಡಿ ಮಾತನಾಡಿದಾಗ ಆಸ್ಪತ್ರೆಯ ಮಹಿಳಾ  ಸಿಬ್ಬಂದಿ ರವಿಸುಬ್ರಮಣ್ಯರಿಗೆ ಕಮೀಷನ್  ಕೊಡಬೇಕು. 900 ರೂ. ಆಗುತ್ತದೆ. ಅದರಲ್ಲಿ 700 ರೂ. ರವಿಸುಬ್ರಮಣ್ಯ ಅವರಿಗೆ ಹೋಗುತ್ತದೆ. ಉಳಿದ 200 ರೂಪಾಯಿ ಆಸ್ಪತ್ರೆಗೆ ಬರುತ್ತದೆ ಎಂದು ಮಾತನಾಡಿದ್ದರು. ಈ ಆಡಿಯೋ ಸಾಕಷ್ಟು ಸಂಚಲನ ಮೂಡಿಸಿತ್ತು. ಇದನ್ನೂ ಓದಿ: ತಾಯಿಗೆ ಕೊರೊನಾ ಬಂತೆಂದು ಕೆನಡಾದಿಂದ ಬಂದ ಮಗನೂ ಮಹಾಮಾರಿಗೆ ಬಲಿ

 ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ  ಶಾಸಕ ರವಿ ಸುಬ್ರಮಣ್ಯ ಆಸ್ಪತ್ರೆಗೆ ಭೇಟಿ ನೀಡಿ, ನನಗೆ ಎಷ್ಟು ಕಮೀಷನ್ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿ ಗರಂ ಆಗಿದ್ದರು.

ವೆಂಕಟೇಶ್‍ಗೆ ನೋಟಿಸ್
ಆಸ್ಪತ್ರೆ ಆಡಿಯೋ ಬಗ್ಗೆ ದೂರು ನೀಡ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ. ಕರೆ ಮಾಡಿದ ಸಂಖ್ಯೆ ಯಾವುದು? ಮಾತನಾಡಿದವರು ಯಾರು ಈ ಬಗ್ಗೆ ಸಂಪೂರ್ಣ ಮಾಹಿತಿ ಕೋರಿ ವೆಂಕಟೇಶ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದಾರೆ.

Share This Article