ಬೆಂಗಳೂರು: ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಕೊಟ್ಟ ಕರ್ನಾಟಕದ ಯೋಧರ ನೆನಪಿಗಾಗಿ ಯುವಾ ಬ್ರಿಗೇಡ್ ಇಂದು ಮೈಲಸಂದ್ರದಲ್ಲಿ ಸಸಿ ನೆಡುವ ಸೈನ್ಯ ವನ ಅಭಿಯಾನ ಪ್ರಾರಂಭಿಸಿದೆ.
50 ಸೈನಿಕ ದಂಪತಿ ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಮೈಲಸಂದ್ರದ ಪಿಳೇಕಮ್ಮ ದೇಗುಲದ ಬಳಿ ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರಕ್ಕೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಹುತಾತ್ಮ ಯೋಧರ ಹೆಸರಿನಲ್ಲಿ ಕಾಡೊಂದನ್ನು ನಿರ್ಮಿಸುವ ಯೋಜನೆ ಇದು ಎಂದು ಖುಷಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ
ಸೈನ್ಯ ವನದ ವಿಶೇಷ ಏನೆಂದರೆ ಈ ಕಾಡಿನಲ್ಲಿ ಪ್ರತಿ ಮರಗಳಿಗೂ ಹುತಾತ್ಮ ಯೋಧರ ಹೆಸರಿಡಲಿದ್ದು, ಸ್ಮಾರಕಗಳು ಸೈನ್ಯಕ್ಕೆ ಸೇರಿದ ಮಾಹಿತಿಗಳನ್ನು ಒಳಗೊಂಡಿರಲಿದೆ. ಮುಂದೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈನ್ಯವನವನ್ನು ನಿರ್ಮಿಸುವ ಯೋಜನೆ ಯುವಾ ಬ್ರಿಗೇಡಿನದ್ದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.