– 10 ವರ್ಷದ ಗೆಳೆತನಕ್ಕೆ ಕೂಡಿಬಂತು ಕಂಕಣ ಭಾಗ್ಯ
ಬೆಂಗಳೂರು: ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶುಭಲಗ್ನದಲ್ಲಿ ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂgರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಇಂದು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.
https://www.instagram.com/p/CBUazPjAbao/
ತನ್ನ ಮದುವೆ ವಿಚಾರವಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಮಯೂರಿ ಅವರು, ಹೌದು ನಾನು ಮದುವೆಯಾದೆ ಎಂದು ಬರೆದು ಅವರ ಮದುವೆ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಮೊದಲು ಕಿರುತೆರೆಯ ಮೂಲಕ ನಟನೆಗೆ ಎಂಟ್ರಿಕೊಟ್ಟಿದ್ದ ಮಯೂರಿ ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ನಟ ಅಜಯ್ ರಾವ್ ಅವರ ಜೊತೆ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.
ಮಯೂರಿ ಅವರು ಮದುವೆಯಾಗಿರುವ ಅರುಣ್ ಅವರು ಐಟಿ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಈಗ ಸದ್ಯ ಅವರು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಗೆಳೆಯರಾಗಿದ್ದ ಅರುಣ್ ಹಾಗೂ ಮಯೂರಿ 10 ವರ್ಷದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಈಗ ತಮ್ಮ ಮನೆಯವರ ಮುಂದೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಅವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
ಮಯೂರಿ ಅವರು `ಅಶ್ವಿನಿ ನಕ್ಷತ್ರ’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ, ಬಳಿಕ `ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. `ಇಷ್ಟಕಾಮ್ಯ’, `ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ `ಆಟಕ್ಕುಂಟು ಲೆಕ್ಕಕ್ಕಿಲ್ಲ’, `ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಸಂಪೂರ್ಣ ಹೊಸಬರೇ ಇರುವ `ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.