ಬೆಂಗಳೂರು: ನಾವು ಯಾವತ್ತೂ ಚಿರಂಜೀವಿ ಅವರ ಕುಟುಂಬದ ಜೊತೆಗೆ ಇರುತ್ತೇವೆ. ಅವರ ಜೊತೆ ಇರುವುದು ನಮ್ಮ ಕರ್ತವ್ಯ ಎಂದು ಅಭಿಷೇಕ್ ಅಂಬರೀಶ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅಭಿಷೇಕ್ ಅಂಬರೀಶ್, ತುಂಬಾನೇ ದುಃಖವಾಗುತ್ತಿದೆ. ಮೊನ್ನೆಯವರೆಗೂ ಚೆನ್ನಾಗಿ ಮಾತನಾಡಿ, ಎಲ್ಲರ ಜೊತೆಯೂ ಫೋನಿನಲ್ಲಿ ಮಾತಾಡಿದ್ದಾರೆ. ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಹೊರಗೆ ಹೋಗಿ ಊಟ ಮಾಡಿರುವವರಿಗೆ ಈ ರೀತಿ ಆಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ನಿಜವಾಗಿಯೂ ನಂಬಲು ಸಾಧ್ಯವಾಗುತ್ತಿಲ್ಲ ಎಂದರು.
ಹಣೆ ಬರಹದಲ್ಲಿ ಏನು ಬರೆದಿರುತ್ತೋ ಗೊತ್ತಿಲ್ಲ. ಆದರೆ ಅನ್ಯಾಯ ಆಗಿದೆ ಎಂದು ನನಗೆ ಅನ್ನಿಸುತ್ತದೆ. ಮೇಘನಾ, ಧ್ರುವರನ್ನು ನೋಡಿದರೆ ತುಂಬಾನೇ ಹೊಟ್ಟೆ ಉರಿಯುತ್ತೆ. ಒಟ್ಟಿಗೆ ಬೆಳೆದು, ಇಷ್ಟು ವರ್ಷ ಒಟ್ಟಿಗೆ ಇದ್ದು, ಎಷ್ಟೋ ಅನುಭವಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ. ಈಗ ನಮ್ಮ ಸ್ನೇಹಿತನಾದ ಚಿರಂಜೀವಿ ಇಂದು ನಮ್ಮ ಜೊತೆ ಇಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಈ ದುಃಖವನ್ನು ಭರಿಸಲು ಅವರ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅಭಿಷೇಕ್ ಚಿರು ಸಾವಿಗೆ ಸಂತಾಪ ಸೂಚಿಸಿದರು.
ನಾವು ಎಷ್ಟೇ ಸಮಾಧಾನ ಮಾಡಿದರೂ ಅಷ್ಟೆ, ಆ ನೋವು ಕಡಿಮೆಯಾಗಲ್ಲ. ಈ ವಯಸ್ಸಿನಲ್ಲೇ ಮೇಘನಾ ಈ ನೋವನ್ನು ಅನುಭವಿಸಬಾರದಿತ್ತು. ಈ ಬಗ್ಗೆ ಯೋಚನೆ ಮಾಡಿದರೆ ಮನ್ನಸ್ಸಿಗೆ ತುಂಬಾ ನೋವಾಗುತ್ತದೆ. ನಾವು ಯಾವತ್ತೂ ಅವರ ಕುಟುಂಬದ ಜೊತೆಗೆ ಇರುತ್ತೇವೆ. ಅವರ ಜೊತೆ ಇರುವುದು ನಮ್ಮ ಕರ್ತವ್ಯವಾಗಿದೆ. ಇಡೀ ಚಿತ್ರರಂಗದಲ್ಲಿದ್ದವರ ಜೊತೆ ಚಿರಂಜೀವಿ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದರು. ಯಾರೊಬ್ಬರನ್ನು ಅವರು ನಿಷ್ಠುರ ಮಾಡಿಲ್ಲ. ಚಿರುವನ್ನು ಯಾರು ಬೇರೆ ಎಂದುಕೊಂಡಿರಲಿಲ್ಲ ಎಂದು ದುಃಖದಿಂದ ಮಾತನಾಡಿದರು.