ಯಾದಗಿರಿ: ನಗರದಲ್ಲಿ ಲಾಕ್ಡೌನ್ ಮುಂದುವರಿದಿದ್ದು, 144 ಸೆಕ್ಷನ್ ಇನ್ನೂ ಜಾರಿಯಲ್ಲಿರುವ ಕಾರಣ ಇಂದು ಯಾದಗಿರಿಯಲ್ಲಿ ಸರ್ಕಾರಿ ಬಸ್ ಸೇವೆ ಆರಂಭಿಸದಿರಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಹೀಗಾಗಿ ಯಾದಗಿರಿಯಲ್ಲಿ ಸರ್ಕಾರಿ ಬಸ್ ಸೇವೆ ಆರಂಭವಾಗಿಲ್ಲ.
ಬಸ್ ಆರಂಭಿಸಲು ಕೆಎಸ್ಆರ್ಟಿಸಿ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ, ಜೊತೆಗೆ ಲಾಕ್ಡೌನ್ ಸಮಯದಲ್ಲಿ ವಿಧಿಸಲಾಗಿದ್ದ 144 ಸೆಕ್ಷನ್ ಇನ್ನೂ ಜಾರಿಯಲ್ಲಿರುವ ಕಾರಣ, ಒಂದು ದಿನ ತಡವಾಗಿ ಮೇ 20ರಂದು ಬೆಳಗ್ಗೆ 7.30ರಿಂದ ಜಿಲ್ಲೆಯಿಂದ ವಿವಿಧ ಜಿಲ್ಲೆಗಳಿಗೆ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಸೂಚನೆ ಮೇರೆಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಹರಿಬಾಬು ಈ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಎಂದಿನಂತೆ ಬಸ್ ಸಂಚಾರವಿದೆ.
ಯಾದಗಿರಿಯಿಂದ ಶಹಪುರ, ಸುರಪುರ, ಹುಣಸಗಿ, ವಡಗೇರಾ ಮತ್ತು ಗುರುಮಿಠಕಲ್ ಗೆ ಬಸ್ ಸಂಚಾರವಿರುತ್ತದೆ. ಸದ್ಯ ಇರುವ ಪ್ರಯಾಣ ದರವೇ ಪ್ರಯಾಣಿಕರು ಭರಿಸಬೇಕು, ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಬಗ್ಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಹರಿಬಾಬು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.