ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರದಲ್ಲಿ ಬೇರೆ ಪಕ್ಷದಿಂದ ಬಂದ 17 ಜನ ಶಾಸಕರ ನಿಷ್ಠೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷಕ್ಕೆ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಕೊಡೋಕೆ ಸಿದ್ಧ ಎಂಬ ಸಿಎಂ ಯಡಿಯೂರಪ್ಪರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸುಧಾಕರ್, ನಮ್ಮ ನಿಷ್ಠೆ ಯಡಿಯೂರಪ್ಪಗೆ ಇದೆ. ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ನಾವು ಪಕ್ಷಕ್ಕೆ ಬಂದಿದ್ದೇವೆ. ಅವರು ಸಿಎಂ ಆಗಬೇಕು ಅಂತಾನೇ ನಾವು ಬಂದಿದ್ದು, ಹೀಗಾಗಿ ಯಡಿಯೂರಪ್ಪ ಹಾಗೂ ಪಕ್ಷಕ್ಕೆ ನಾವು ನಿಷ್ಠರಾಗಿರುತ್ತೇವೆ. ಪಕ್ಷ ಹೇಳಿದ ಹಾಗೆ ಕೇಳುತ್ತೇವೆ ಎಂದರು. ಇದನ್ನೂ ಓದಿ:ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ
ಬಿಜೆಪಿ ಯಲ್ಲಿ ಯಡಿಯೂರಪ್ಪ ಅಗ್ರಮಾನ್ಯ ನಾಯಕರು. ಕರ್ನಾಟಕದಲ್ಲಿ ಬಿಜೆಪಿ ಇಲ್ಲದಾಗ ಶ್ರಮ ಪಟ್ಟು ಯಡಿಯೂರಪ್ಪ, ಆನಂತ್ ಕುಮಾರ್ ಪಕ್ಷ ಕಟ್ಟಿದ್ದಾರೆ. ಪಕ್ಷ ಇಷ್ಟು ಬೆಳೆಯಲು ಅವರ ಹೋರಾಟ ಇದೆ. ಆರ್ಎಸ್ಎಸ್ ಹಿನ್ನೆಲೆಯಲ್ಲಿ ಬಂದು ಪಕ್ಷ ಕಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಯಡಿಯೂರಪ್ಪ ಪರ ಬ್ಯಾಟ್ ಬೀಸಿದರು.
ಯಡಿಯೂರಪ್ಪನವರು ಯಾವ ಸಂದರ್ಭದಲ್ಲಿ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಪಕ್ಷ ಏನೇ ಹೇಳಿದ್ರು ಅದನ್ನು ಮಾಡ್ತೀವಿ ಅನ್ನೋ ಸಂದೇಶವನ್ನು ಅವರು ಕೊಟ್ಟಿದ್ದಾರೆ ಅನ್ನಿಸುತ್ತೆ. ಆದ್ರೆ ನಾವು 17 ಜನ ಶಾಸಕರು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮೇಲೆ ನಂಬಿಕೆ ಇಟ್ಟು ಬಂದಿದ್ದೇವೆ. ಅವರು ಸಿಎಂ ಆಗಲಿ ಅಂತಾನೇ ನಾವು ಬಂದಿದ್ದು. ನಮ್ಮ ನಿಷ್ಠೆ ಯಡಿಯೂರಪ್ಪ ಹಾಗೂ ಪಕ್ಷಕ್ಕೂ ಇದೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಅಂತ ಸ್ಪಷ್ಟಪಡಿಸಿದರು.