– ನಾನೆಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ
ಕಲಬುರಗಿ: ಖಾತೆ ಬದಲಾವಣೆಯಿಂದ ಉಂಟಾದ ಅಸಮಾಧಾನ ಸದ್ಯದಲ್ಲೇ ಶಮನ ಆಗುತ್ತೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಲ್ಲವನ್ನೂ ಪರಿಹರಿಸಲಿದ್ದಾರೆ ಅಂತ ಬಿಎಸ್ವೈ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದ್ದಾರೆ.
ಕಲಬುರಗಿಯ ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಜಿಲ್ಲೆಗೆ ಆಗಮಿಸಿದ ವಿಜಯೇಂದ್ರ, ಕಲಬುರಗಿ ಏರ್ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅಸಮಾಧಾನಗೊಂಡ ಸಚಿವರ ಜೊತೆ ಸಿಎಂ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.
ಖಾತೆ ಹಂಚಿಕೆಯಲ್ಲಿ ನನ್ನ ಪಾತ್ರವಿದೆ ಎಂಬ ಆರೋಪಗಳೆಲ್ಲ ಶುದ್ಧ ಸುಳ್ಳು. ಯಡಿಯೂರಪ್ಪನವರು ನಾಲ್ಕು ದಶಕಗಳ ಹೋರಾಟದ ಮೂಲಕ ಸಿಎಂ ಆದವರು. ಈ ಹಿಂದೆ ಸಹ ಡಿಸಿಎಂ ಆಗಿ, ಸಿಎಂ ಆಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಿಗೆ ಯಾರ ಹಸ್ತಕ್ಷೇಪದ ಅಗತ್ಯವೂ ಬೀಳೋದಿಲ್ಲ. ಅಲ್ಲದೇ ನನ್ನ ಹಸ್ತಕ್ಷೇಪವಂತೂ ಇಲ್ಲವೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಅವರ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ ಬಿ.ವೈ ವಿಜಯೇಂದ್ರ ಖಾಸಗಿ ಕಾರ್ಯಕ್ರಮಗಳಿಗೆ ತೆರಳಿದ್ದರು.