ಮಂಗಳೂರು: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಹಲವು ದಶಕಗಳ ಕಾಲ ಯಕ್ಷ ಸೇವೆ ಮಾಡಿದ್ದ ಶ್ರೀ ಸಂಪಾಜೆ ಶೀನಪ್ಪ ರೈ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಶ್ರೀ ಶೀನಪ್ಪ ರೈ ಅವರಿಗೆ ಯಕ್ಷಗಾನ ಬಯಲಾಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದವು. ವಿವಿಧ ಯಕ್ಷಗಾನ ಮೇಳಗಳ ಮೂಲಕ ಅವರು ಕಲಾಸೇವೆ ಮಾಡಿದ್ದರು ಎಂದು ನಳೀನ್ ಕುಮಾರ್ ಸ್ಮರಿಸಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಳೀನ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ
ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಇಂದು ಬೆಳಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶೀನಪ್ಪ ರೈ ಅವರು, ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ತಂದೆಯಿಂದ ಯಕ್ಷಗಾನ ಕಲಿತು ಹೆಚ್ಚಿನ ತರಬೇತಿಯನ್ನು ಕುಂಬಳೆ ಕಣ್ಣನ್ ಅವರಿಂದ ಕಲಿತಿದ್ದರು.
ಇರಾ ಶ್ರೀ ಸೋಮನಾಥೇಶ್ವರ ಮೇಳದಲ್ಲಿ ತನ್ನ 13ನೇ ವರ್ಷ ವಯಸ್ಸಿನಲ್ಲಿ ತಿರುಗಾಟ ಆರಂಭಿಸಿದ ಬಳಿಕ ಬಳಿಕ ವೇಣೂರು, ಸೌಕೂರು, ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಶೀನಪ್ಪ ರೈ ಅವರಿಗೆ ರಕ್ತಾಬೀಜಾಸುರ, ಶಿಶುಪಾಲ, ಹಿರಣ್ಯಾಕ್ಷನಂತಹ ಪಾತ್ರಗಳು ಖ್ಯಾತಿಯನ್ನು ತಂದುಕೊಟ್ಟಿತ್ತು. 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿತ್ತು.