– ಡಾಟಾ ಎಂಟ್ರಿಯೂ ಇಲ್ಲ, ಟೆಸ್ಟಿಂಗ್ ಸಹ ಇಲ್ಲ
ಮೈಸೂರು: ಟಿಎಚ್ಒ ಡಾ.ನಾಗೇಂದ್ರ ಆತ್ಮಹತ್ಯೆಯಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ಕೊರೊನಾ ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ.
ಮೈಸೂರಿನ ನಂಜನಗೂಡು ಟಿಎಚ್ಒ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೂ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಶುಕ್ರವಾರದಿಂದಲೇ ಕೊರೊನಾ ಪರೀಕ್ಷೆ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಕೂಡ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ. ಟೆಸ್ಟ್ ಮಾತ್ರವಲ್ಲ ಡಾಟಾ ಎಂಟ್ರಿ ಸಹ ನಡೆಯುತ್ತಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರದಿಂದ ರಾಜ್ಯಾದ್ಯಂತ ಕೊರೊನಾ ಟೆಸ್ಟ್ ಪ್ರಕ್ರಿಯೆ ನಿಲ್ಲುತ್ತದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ಇದಿಂದಾಗಿ ಸೋಮವಾರದಿಂದ ರಾಜ್ಯದ ಪರಿಸ್ಥಿತಿ ಗಂಭೀರ ಎನ್ನುವಂತಾಗಿದ್ದು, ವೈದ್ಯರು ನಿಲು ಬದಲಿಸುತ್ತಾರಾ ಕಾದು ನೋಡಬೇಕಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವೈದ್ಯಕೀಯ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ, ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಠ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಡಾ.ನಾಗೇಂದ್ರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಅವರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ಕೊಡಿಸುವುದಾಗಿ ಸಹ ಭರವಸೆ ನೀಡಲಾಗಿದೆ. ಅಲ್ಲದೆ ವೈದ್ಯರ ಕೆಲಸದ ಒತ್ತಡ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಸರ್ಕಾರ ತಿಳಿಸಿದೆ.