ಮಡಿಕೇರಿ: ಸಾವಿನ ಸೂತಕದ ಮಧ್ಯೆ ಮೃತರಿಗೆ ನೀಡಿದ್ದ ಪರಿಹಾರ ಹಣದ ಹಂಚಿಕೆಯಲ್ಲಿ ನಾರಾಯಣ್ ಆಚಾರ್ ಕುಟುಂಬದೊಳಗೆ ಮನಸ್ತಾಪಗಳಾಗಿವೆ.
ಆಗಸ್ಟ್ 5 ರಂದು ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಿಂದ ಮೃತಪಟ್ಟಿದ್ದ ಅರ್ಚಕ ನಾರಾಯಣ್ ಆಚಾರ್ ಹಾಗೂ ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ ಇಬ್ಬರಿಗೆ ಹಂಚಿದ್ದ ಪರಿಹಾರ ಹಣದಲ್ಲಿ ನಮಗೂ ಶೇ.50 ರಷ್ಟು ಪಾಲು ಬರಬೇಕು ಎಂದು ಮೃತ ನಾರಾಯಣ್ ಆಚಾರ್ ಮಕ್ಕಳು ಸೋದರ ಅತ್ತೆ ಸುಶೀಲಾ ಅವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಾರೆ.
ನಾರಾಯಣ್ ಆಚಾರ್ ಅಣ್ಣರಾದ ಆನಂದ ತೀರ್ಥರು ಬ್ರಹ್ಮಚಾರಿ ಆಗಿದ್ದರಿಂದ ಅವರ ಪರಿಹಾರದ ಹಣವನ್ನು ತಂಗಿ ಸುಶೀಲಗೆ ನೀಡಲಾಗಿತ್ತು. ಹಾಗೆಯೇ ನಾರಾಯಣ್ ಆಚಾರ್ ಇಬ್ಬರು ಹೆಣ್ಣು ಮಕ್ಕಳಿಗೆ ನಿನ್ನೆ ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಲಾಗಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಾರಾಯಣ್ ಆಚಾರ್ ಮಕ್ಕಳು ಆನಂದ ತೀರ್ಥ ಅವರನ್ನು ನಾವೇ ನೋಡಿಕೊಂಡಿದ್ದೆವು. ಹೀಗಾಗಿ ಚೆಕ್ ಸುಶೀಲಗೆ ವಿಸ್ತರಿಸಿದ್ದು ಸರಿಯಲ್ಲ ಎಂದು ಮಕ್ಕಳಾದ ನಮಿತಾ ಮತ್ತು ಶಾರದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ಭಾಗಮಂಡಲದಲ್ಲಿ ಸಚಿವ ವಿ. ಸೋಮಣ್ಣ ಚೆಕ್ ವಿತರಿಸಿದ್ದರು. ಈಗಾಗಲೇ ಚೆಕ್ ವಿತರಿಸಿದ್ದೇವೆ. ಅವರ ನಡುವಿನ ಜಗಳ ಅವರೇ ಇತ್ಯರ್ಥ ಮಾಡಿಕೊಳ್ಳಲಿದ್ದಾರೆ. ಇಂದು ಸಂಜೆಯೊಳಗೆ ಇತ್ಯರ್ಥ ಮಾಡಿಕೊಳ್ಳಲಿದ್ದಾರೆ ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ದೂರವಾಣಿ ಮೂಲಕ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.