ಮಾರುಕಟ್ಟೆ ಶುಲ್ಕ ಹೆಚ್ಚಳಕ್ಕೆ ವಿರೋಧ – ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ

Public TV
2 Min Read
HBL APMC 1

– ಹುಬ್ಬಳ್ಳಿ, ರಾಯಚೂರು ಎಪಿಎಂಸಿ ಸ್ತಬ್ಧ

ಹುಬ್ಬಳ್ಳಿ/ರಾಯಚೂರು: ಮಾರುಕಟ್ಟೆ ಶುಲ್ಕ ಹೆಚ್ಚಳ ವಿರೋಧಿಸಿ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರ ಬಂದ್ ಮಾಡಿ ವ್ಯಾಪಾರಿಗಳು, ಉದ್ಯಮಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ರಾಯಚೂರು ಮತ್ತು ಹುಬ್ಬಳ್ಳಿಯ ಎಪಿಎಂಸಿಗಳು ಸಂಪೂರ್ಣ ಸ್ತಬ್ಧವಾಗಿದೆ.

ರಾಜ್ಯದಾದ್ಯಂತ ಸಾಂಕೇತಿಕವಾಗಿ ಎಪಿಎಂಸಿ ಬಂದ್ ಕರೆ ನೀಡಿದ್ದು, ಶೇ.0.35 ಇದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಸರ್ಕಾರ ಏಕಾಏಕಿ ಶೇ.1ಕ್ಕೆ ಹೆಚ್ಚಳಕ್ಕೆ ವರ್ತಕರ ವಿರೋಧ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ರಾಜ್ಯದಾದ್ಯಂತ ಎಪಿಎಂಸಿ ಬಂದ್ ನೀಡಿದ್ದು, ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

HBL APMC

ಡಿ. 23ರಂದು ಬೆಂಗಳೂರಿನಲ್ಲಿ ಎಫ್‍ಕೆಸಿಸಿಐ ಹಾಗೂ ಕೆಸಿಸಿಐ ನೇತೃತ್ವದಲ್ಲಿ ರಾಜ್ಯದ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ಶುಲ್ಕ ಹೆಚ್ಚಳ ಹಿಂಪಡೆಯಲು ವಿನಂತಿಸಿ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಎಪಿಎಂಸಿ ಬಂದ್ ಮಾಡಲು ನಿರ್ಣಯ ಕೈಗೊಂಡಿರುವುದಾಗಿ ಹುಬ್ಬಳ್ಳಿಯ ವರ್ತಕರು ತಿಳಿಸಿದ್ದಾರೆ.

RCR APMC

ರಾಯಚೂರು: ನಗರದ ರಾಜೇಂದ್ರ ಗಂಜ್ ಹಾಗೂ ಹತ್ತಿ ಮಾರುಕಟ್ಟೆ ಬಂದ್ ಮಾಡಲಾಗಿದೆ. ಏಷ್ಯಾದ ದೊಡ್ಡ ಹತ್ತಿ ಮಾರುಕಟ್ಟೆ ಖರೀದಿ ಬಂದ್ ಮಾಡಿ ರಾಯಚೂರು ಫ್ಯಾಕ್ಟರಿ ಮಾಲಕರ ಸಂಘ ಹೋರಾಟ ನಡೆಸಿದೆ.

ಹತ್ತಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಆಗಿರೋದ್ರಿಂದ ರೈತರು ಪರದಾಡುತ್ತಿದ್ದಾರೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ನೂರಾರು ರೈತರು ವ್ಯಾಪಾರ ಇಲ್ಲದೆ ಪರದಾಡುತ್ತಿದ್ದಾರೆ. ಹತ್ತಿ ತುಂಬಿಕೊಂಡು ಬಂದು ವಾಹನಗಳನ್ನ ಸಾಲಾಗಿ ನಿಲ್ಲಿಸಿದ್ದಾರೆ. ಮಾರುಕಟ್ಟೆ ಶುಲ್ಕವನ್ನ ಕೂಡಲೇ ಕಡಿಮೆ ಮಾಡಬೇಕೆಂದು ವರ್ತಕರು, ಹತ್ತಿ ಮಿಲ್ ಮಾಲಕರು ಒತ್ತಾಯ ಮಾಡಿದ್ದಾರೆ. ಎಪಿಎಂಸಿ ಶುಲ್ಕ ಹೆಚ್ಚಳ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

RCR APMC 1

ಹತ್ತಿ, ತೊಗರಿ, ಭತ್ತ ಬೆಳೆದ ರೈತರು ವ್ಯಾಪಾರ ಇಲ್ಲದ ಹಿನ್ನೆಲೆ ಕಷ್ಟಕ್ಕೀಡಾಗಿದ್ದಾರೆ. ಆದ್ರೆ ಶುಲ್ಕ ಹೆಚ್ಚಳದಿಂದ ವ್ಯಾಪಾರಿಗಳಿಗಿಂತ ರೈತರಿಗೆ ಹೆಚ್ಚು ಹೊರೆಯಾಗುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಗಮನಹರಿಸಬೇಕು ಅಂತ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳಿಂದ ರಾಜೇಂದ್ರ ಗಂಜ್ ಬಂದ್ ಆಗಿದ್ದು ಇಂದು ಹತ್ತಿ ಮಾರ್ಕೆಟ್ ಬಂದ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *