ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಲು ಕೇಂದ್ರ ಸರ್ಕಾರ ಕಾರಣ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಮರಾಠಿ ದೈನಿಕವೊಂದಕ್ಕೆ ಸಂದರ್ಶನ ನೀಡಿದ ಅವರು, ಆರಂಭದ ದಿನದಲ್ಲಿ ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ಯಾರಾಸಿಟಮಾಲ್ ಮಾತ್ರೆಗಳು ಸೇವಿಸುತ್ತಿದ್ದರು ಮತ್ತು ಅವರ ಸ್ಕ್ರೀನಿಂಗ್ ಸರಿಯಾಗಿ ಆಗುತ್ತಿರಲಿಲ್ಲ. ನಮ್ಮ ಮೊದಲ ಕೊರೊನಾ ರೋಗಿ ಟ್ರಾವೆಲ್ ಹಿಸ್ಟರಿ ದುಬೈ ಆಗಿತ್ತು. ಆದರೆ ಕೇಂದ್ರ ಸರ್ಕಾರ ಆರಂಭದಲ್ಲಿ ನೀಡಿದ ಪಟ್ಟಿಯಲ್ಲಿ ದುಬೈ ಮತ್ತು ಅಮೆರಿಕದಿಂದ ಮರಳಿದವರ ಸ್ಕ್ರೀನಿಂಗ್ ಮಾಡುವಂತೆ ಹೇಳಿರಲಿಲ್ಲ ಎಂದು ಆರೋಪಿಸಿದರು.
ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಕ್ವಾರಂಟೈನ್ ನಲ್ಲಿ ಇರುವಂತೆ ನಾವು ಸೂಚಿಸಿದ್ದೆವು. ಆದರೆ ಅವರು ಇತರರ ಜೊತೆ ಸಂಪರ್ಕಕ್ಕೆ ಬಂದಿದ್ದರಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಯಿತು ಎಂದು ತಿಳಿಸಿದರು.
ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸುವುದು ಸರಿಯಲ್ಲ. ಒಂದು ವೇಳೆ ಲಾಕ್ಡೌನ್ ಘೋಷಣೆಗೂ ಮುನ್ನ ವಲಸೆ ಕಾರ್ಮಿಕರು ತೆರಳಿದ್ದರೆ ಅವರು ಯಾವುದೇ ಸಮಸ್ಯೆ ಅನುಭವಿಸುತ್ತಿರಿಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮೇ ಅಂತ್ಯದ ಒಳಗೆ ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ ಮಂದಿಗೆ ಸೋಂಕು ಬರಬಹುದು ಎಂದು ಊಹಿಸಿತ್ತು. ಆದರೆ ನಾವು ನಿಯಂತ್ರಣ ಕ್ರಮ ಕೈಗೊಳ್ಳದೇ ಇದ್ದಿದ್ದರೆ ಈ ಊಹೆ ನಿಜವಾಗುವ ಸಾಧ್ಯತೆ ಇತ್ತು. ಸಂಖ್ಯೆ ಹೆಚ್ಚಾಗುತ್ತಿದ್ದರೂ ಊಹಿಸಿದ ಸಂಖ್ಯೆಗೆ ಹೋಲಿಸಿದರೆ ನಾವು ಬಹಳ ಕಡಿಮೆ ಇದ್ದೇವೆ ಎಂದು ಹೇಳಿದರು.