ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಆತನ ಸಂಬಂಧಿಗಳು ಹಾಡಹಗಲೇ ಕೊಲೆ ಮಾಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೇ 15 ರಂದು ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (39) ಕೊಲೆಯಾಗಿದ್ದ ವ್ಯಕ್ತಿ. ಸಂಬಂಧಿಕರಾದ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ. ಕೊಲೆಯ ದೃಶ್ಯಗಳು ಉಮೇಶ್ ಮನೆ ಎದುರಿನ ಸಿಸಿಟಿವಿಯಲ್ಲಿ ಸೆರೆಯಾಗಿರೋದು ಬೆಳಕಿಗೆ ಬಂದಿದೆ.
ಅಂಗವಿಕಲನಾಗಿದ್ದ ಉಮೇಶ್ ತಮ್ಮ ತ್ರಿಚಕ್ರ ಬೈಕ್ ಮೇಲೆ ಹೊರಟಿದ್ದಾಗ ಆರೋಪಿಗಳು ತಡೆದಿದ್ದಾರೆ. ನಂತರ ಬೈಕ್ ಮೇಲಿಂದ ಕೆಡವಿ ಹಲ್ಲೆ ಮಾಡಿ, ಕಲ್ಲಿನಿಂದ ಹೊಡೆದು ಕೊಲೆಗೈದಿದ್ದಾರೆ. ಈ ಸಮಯದಲ್ಲಿ ಹತ್ತಿರದಲ್ಲಿದ್ದ ಉಮೇಶ್ ಪತ್ನಿ ಸುಮಾ ಚೀರಾಡಿ ಜನರನ್ನು ಕರೆಯಲು ಪ್ರಯತ್ನಿಸಿದ್ದಾರೆ. ಆಗ ಕೊಲೆಗಾರರ ಪೈಕಿ ಓರ್ವ ಸುಮಾರನ್ನು ಸಹ ಅಟ್ಟಿಸಿಕೊಂಡು ಓಡಿ ಬಂದಿದ್ದಾನೆ. ಆಗ ಸುಮಾ ಮನೆಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಬಚಾವ್ ಆಗಿದ್ದಾರೆ.
ಮೃತ ಉಮೇಶ್ ಮೇಲೆ ಈ ಹಿಂದೆಯೂ ಕೂಡ ಹಲ್ಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ತನ್ನ ಮನೆ ಹಾಗೂ ಮನೆ ಸುತ್ತ ಸಿಸಿಟಿವಿ ಅಳವಡಿಸಿದ್ದರು. ಇದೀಗ ಸಿಸಿಟಿವಿಯ ಮೂಲಕ ಅವರ ಕೊಲೆ ರಹಸ್ಯ ಬಯಲಾಗಿದೆ. ಈ ಸಂಬಂಧ ಮೃತನ ಪತ್ನಿ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.