ಬೆಂಗಳೂರು: ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರನ್ನು ಇಡಲು ರಾಜ್ಯ ಸರ್ಕಾರ ರೆಡ್ ಸಿಗ್ನಲ್ ತೋರಿದೆ.
ಬಿಬಿಎಂಪಿ ಕೌನ್ಸಿಲ್ ಸಭೆ 2020 ಮಾರ್ಚ್ 7 ರಂದು ಮಧುಕರ್ ಶೆಟ್ಟಿ ಹೆಸರನ್ನು ಇಡುವಂತೆ ಅಂಗೀಕಾರ ಮಾಡಿತ್ತು. ಈ ನಿರ್ಣಯವನ್ನು ಅಂಗೀಕರಿಸುವಂತೆ ಸೆ.22 ರಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತರ ಮೂಲಕ ರವಾನೆ ಮಾಡಿತ್ತು. ಆದರೆ ಈಗ ಈ ಪ್ರಸ್ತಾಪವನ್ನು ಸರ್ಕಾರ ಒಪ್ಪಿಲ್ಲ ಎಂದು ಹೇಳಿ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಆಯುಕ್ತರಿಗೆ ಡಿ. 15 ರಂದು ಪತ್ರ ಬರೆದು ತಿಳಿಸಿದೆ.
ಬೆಂಗಳೂರಿನ ಯಾವುದೋ ವೃತ್ತಕ್ಕೆ ಏನೇನೋ ಹೆಸರುಗಳನ್ನು ಇಡುವಾಗ ನಿಷ್ಠಾವಂತ ಅಧಿಕಾರಿ ಹೆಸರನ್ನು ತಿರಸ್ಕರಿಸಿದ್ದು ಯಾಕೆ ಎಂದು ಪ್ರಶ್ನಿಸಿ ಬಿಬಿಎಂಪಿ ಕಾಂಗ್ರೆಸ್ ಮುಖಂಡ ಶಿವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ
ಮಧುಕರ್ ಶೆಟ್ಟಿ ಯಾರು?
ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಗಣಿ ಸಂಬಂಧಿತ ಸಲ್ಲಿಸಿದ ವರದಿ ನೀಡಿದ್ದ ತಂಡದಲ್ಲಿ ಕೆಲಸ ಮಾಡಿದ್ದ ಮಧುಕರ್ ಶೆಟ್ಟಿ ಭ್ರಷ್ಟರನ್ನು ಜೈಲಿಗಟ್ಟಿ ಲೋಕಾಯುಕ್ತಕ್ಕೆ ಖದರ್ ತಂದು ಕೊಟ್ಟಿದ್ದರು. ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದ ಮಧುಕರ್ ಶೆಟ್ಟಿ 2018ರ ಡಿಸೆಂಬರ್ 28 ರಂದು ಚಿಕಿತ್ಸೆ ಫಲಕಾರಿಯಾಗದೇ ಹೈದ್ರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.