ಬೀದರ್: ಮದುವೆಯಾಗಿ ಆರು ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ.
ಉಮೇರಾಬೇಗಂ(25) ಮೃತ ನವವಿವಾಹಿತೆಯಾಗಿದ್ದು, ಈಕೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ನವ ವಿವಾಹಿತೆ ಮೂಲತಃ ಬೀದರ್ ತಾಲೂಕಿನ ರೇಕುಳಗಿ ಗ್ರಾಮದ ನಿವಾಸಿ.
2020ರ ಜುಲೈ 13 ರಂದು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದ ಮಸ್ತಾನ್ ಎಂಬವರಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಆರು ತಿಂಗಳಲ್ಲಿಯೇ ಮುಗ್ಧ ಹೆಣ್ಣುಮಗಳು ನಿರ್ಣಾಗ್ರಾಮದ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ಗಂಡನ ಮನೆಯವರು ಅವಳೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳುತ್ತಿದ್ದರೆ, ಇತ್ತ ಹುಡುಗಿಯ ಮನೆಯವರು ವಿನಾಕಾರಣ ಮಾನಸಿಕವಾಗಿ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸ್ಥಳದಲ್ಲಿ ಹುಡುಗಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದು ಕೊಲೆಯೋ, ಇಲ್ಲಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಲಿದೆ. ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿ ವಿವಾಹಿತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಗಂಡನ ಮನೆಯವರು ಪ್ರಚೋದನೆ ನೀಡಿದ್ದಾರೆ ಎಂದು ಹುಡುಗಿ ಕಡೆಯವರು ದೂರು ನೀಡಿದ್ದಾರೆ.
ಈಗಾಗಲೇ ಆರೋಪಿ ಗಂಡ ಮಸ್ತಾನ್ ನನ್ನು ಬಂಧನ ಮಾಡಲಾಗಿದ್ದು, ತನಿಖೆಯಲ್ಲಿ ಏನು ಕಂಡು ಬರುತ್ತೆ ಆ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಎಸ್ಪಿ ನಾಗೇಶ್ ಡಿಎಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.