– ಮಹಿಳೆಯರ ಜೋಡಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಬೆಳಗಾವಿ: ವಾರದ ಹಿಂದೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದ್ದ ಮಹಿಳೆಯರ ಜೋಡಿ ಕೊಲೆ ಪ್ರಕರಣದ ಹಂತಕರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ
ಮಚ್ಛೆಯ ಲಕ್ಷ್ಮಿ ನಗರದಲ್ಲಿ ವಾಯು ವಿಹಾರ ಮಾಡುತ್ತಿದ್ದ ರೋಹಿನಿ ಹುಲಮನಿ (21) ಹಾಗೂ ರಾಜಶ್ರೀ ಬನ್ನಾರ (21) ಅವರ ಬರ್ಬರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಜೋಡಿ ಕೊಲೆ ಹಿಂದೆ ಮತ್ತೋರ್ವ ಮಹಿಳೆಯ ಸಂಚು ಹಾಗೂ ಅನೈತಿಕ ಸಂಬಂಧವೇ ಪ್ರಮುಖ ಕಾರಣ ಎಂಬುವುದು ತನಿಖೆಯಿಂದ ದೃಢಪಟ್ಟಿದೆ.
ಬಂಧಿತರನ್ನು ಕಾಳ್ಯಾನಟ್ಟಿ ಗ್ರಾಮದ ಕಲ್ಪನಾ ಮಲ್ಲೇಶ್ (35), ಸುರತೆ ಗ್ರಾಮದ ಮಹೇಶ್ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ (19) ಗಣೇಪುರದ ರೋಹಿತ್ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ಬನ್ನಾರ (18) ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣದ ಮೊದಲನೇ ಆರೋಪಿ ಕಲ್ಪನಾ ಹಾಗೂ ಮೃತ ರೋಹಿನಿ ಪತಿ ಗಂಗಪ್ಪ ಹುಲಮನಿ ಮದುವೆಗೂ ಮುನ್ನ ಮಧ್ಯೆ ಅನೈತಿಕ ಸಂಬಂಧ ಇತ್ತು. ಬಳಿಕ ಕಲ್ಪನಾಳಿಂದ ದೂರವಾಗಿದ್ದ ಗಂಗಪ್ಪ ರೋಹಿನಿ ಜೊತೆಗೆ ವಿವಾಹವಾಗಿದ್ದನು. ಅಲ್ಲದೇ ರೋಹಿನಿ ಐದು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಮದುವೆ ಮುಂಚೆ ಗಂಗಪ್ಪನಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕಲ್ಪನಾ ಅನೈತಿಕ ಸಂಬಂಧ ಬೆಳೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿಣಿ ವಿವಾಹದ ಬಳಿಕ ಗಂಗಪ್ಪ ಊರು ಬಿಟ್ಟು ಮಚ್ಚೆ ಗ್ರಾಮಕ್ಕೆ ಬಂದು ನೆಲೆಸಿದ್ದನು. ಇದರಿಂದ ಗಂಗಪ್ಪ ದೂರವಾಗಿದ್ದನ್ನು ಆರೋಪಿ ಕಲ್ಪನಾಗೆ ಸಹಿಸಿಕೊಳ್ಳಲು ಆಗಿಲ್ಲ. ಈ ಹಿಂದೆ ನೀಡಲಾಗಿದ್ದ ಹಣ ಮರಳಿಸುವಂತೆ ಗಂಗಪ್ಪನಿಗೆ ಆರೋಪಿ ಕಲ್ಪನಾ ಸತಾಯಿಸುತ್ತಿದ್ದಳು. ಅಲ್ಲದೇ ಗಂಗಪ್ಪನ ಜೊತೆಯೇ ಸಂಬಂಧ ಮುಂದುವರಿಸಲು ಹಠಕ್ಕೆ ಬಿದ್ದ ಕಲ್ಪನಾ, ರೋಹಿನಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಸಹೋದರಿ ಪುತ್ರ ಮಹೇಶ್ ಕೂಡ ಇದಕ್ಕೆ ಸಾಥ್ ನೀಡಿದ್ದಾನೆ. ಈ ವಿಷಯವನ್ನು ಮಹೇಶ್ ಸಂಬಂಧಿಕರ ಬಳಿ ಹೇಳಿ ಕೊಲೆಗೆ ಸಂಚು ರೂಪಿಸಿದ್ದಳು.
ಅದರಂತೆಯೇ ಸೆಪ್ಟೆಂಬರ್ 26 ಸಂಜೆ ಸುಮಾರು 4 ಗಂಟೆಗೆ ಗರ್ಭಿಣಿ ರೋಹಿನಿ ಸ್ನೇಹಿತೆ ಜ್ಯೋತಿ ಜೊತೆಗೆ ಮಚ್ಛೆಯ ಲಕ್ಷ್ಮಿನಗರದಲ್ಲಿ ವಾಯುವಿಹಾರ ಮಾಡುತ್ತಿದ್ದಳು. ಆಗ ಬೈಕ್ ಮೇಲೆ ಬಂದ ನಾಲ್ವರು ಮೊದಲು ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಮೊದಲು ರೋಹಿನಿಯನ್ನು ಹತ್ಯೆ ಮಾಡಿದ್ದಾರೆ. ಆದರೆ ಸಾಕ್ಷ್ಯ ನಾಶಪಡಿಸಲು ರಾಜಶ್ರೀ ಬನ್ನಾರಳನ್ನು ಹತ್ಯೆಗೈದಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳನ್ನ ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಗಂಗಪ್ಪ ಹಾಗೂ ಕಲ್ಪನಾ ಮಧ್ಯೆ ವಿವಾಹ ಪೂರ್ವ ಇದ್ದ ದೈಹಿಕ ಸಂಬಂಧ ಜೋಡಿ ಕೊಲೆಗೆ ಕಾರಣವಾಗಿದೆ ಎಂದು ಬೆಳಗಾವಿ ಡಿಸಿಪಿ ಘಟನೆಯ ವಿವರವನ್ನು ತಿಳಿಸಿದರು.