– ರೊಚ್ಚಿಗೆದ್ದ ದಲ್ಲಾಳಿ ಮಹಿಳೆಯನ್ನೇ ಒತ್ತೆಯಾಳಾಗಿರಿಸಿದ್ರು
ಲಕ್ನೋ: ಮದುವೆಯಾಗಲು ಬಂದ ವರ ಹಾಗೂ ಸಂಬಂಧಿಕರು ವಧುವಿನ ಮನೆ ಸಿಗದೆ ರಾತ್ರಿ ಪೂರ್ತಿ ಹುಡುಕಾಡಿ ಕಂಗಾಲಾದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಡಿಸೆಂಬರ್ 10ರಮದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊತ್ವಾಲಿ ಪಟ್ಟಣದ ಕಾನ್ಷಿರಾಮ್ ಕಾಲೋನಿ ನಿವಾಸಿಯ ಯುವಕನ ಮದುವೆ ರಾಣಿಪುರದ ಯುವತಿಯೊಂದಿಗೆ ಡಿಸೆಂಬರ್ 11 ರಂದು ಫಿಕ್ಸ್ ಆಗಿತ್ತು. ಹೀಗಾಗಿ ವರ ಹಾಗೂ ಆತನ ಸಂಬಂಧಿಕರು ಡಿಸೆಂಬರ್ 10ರಂದು ರಾಣಿಪುರಕ್ಕೆ ಬಂದಿದ್ದಾರೆ.
ಹೀಗೆ ಬಂದವರಿಗೆ ಯುವತಿಯ ಮನೆ ವಿಳಾಸ ಸಿಗದೆ ರಾತ್ರಿಯೆಲ್ಲ ಹುಡುಕಾಟ ನಡೆಸಿ ಕಂಗಾಲಾಗಿದ್ದು, ತಮ್ಮ ಮನೆಗೆ ವಾಪಸ್ ಬಂದಿದ್ದಾರೆ. ಮರುದಿನ ಬೆಳಗ್ಗೆ ಮದುವೆ ಫಿಕ್ಸ್ ಮಾಡಿದ್ದ ದಲ್ಲಾಳಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ ಕೊಟ್ಟಾಲಿ ಪೊಲಿಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದರು.
ವರನಿಗೆ ಇದು ಎರಡನೇಯ ಮದುವೆಯಾಗಿದೆ. ಇದಕ್ಕೂ ಮೊದಲು ಆತ ಬಿಹಾರದ ಸಮಷ್ಠಿಪುರದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಆಕೆಯಿಂದ ದೂರವಾಗಿದ್ದನು. ಬಳಿಕ ರಾಣಿಪುರದ ಯುವತಿಯೊಂದಿಗೆ ಎರಡನೇ ಮದುವೆಯ ಸಿದ್ಧತೆ ನಡೆಸಿಕೊಂಡಿದ್ದನು. ಈ ಮದುವೆ ದಲ್ಲಾಳಿ ಮಹಿಳೆಯೊಬ್ಬರ ಮೂಲಕ ಫಿಕ್ಸ್ ಆಗಿತ್ತು. ವಿಶೇಷ ಅಂದ್ರೆ ವರ ಆಗಲಿ ವರನ ಕಡೆಯವರಾಗಲಿ ಹುಡುಗಿಯನ್ನು ನೋಡಲು ಹೋಗಿರಲಿಲ್ಲ. ಆದರೆ ಮದುವೆಯ ಖರ್ಚಿಗೆ ಅಂತ 20 ಸಾವಿರ ಹಣ ಮಾತ್ರ ನೀಡಿದ್ದರು.
ಇತ್ತ ಮದುವೆಯ ಹಿಂದಿನ ವರ ಹಾಗೂ ವರನ ಕಡೆಯವರು ಬಂದಿದ್ದಾರೆ. ಆದರೆ ಅವರಿಗೆ ವಧುವಿನ ಮನೆಯ ವಿಳಾಸವೇ ಸಿಗದೆ ಪರದಾಡಿದ್ದಾರೆ. ಕೊನೆಗೆ ಸಿಟ್ಟುಗೊಂಡು ಮನೆಗೆ ವಾಪಸ್ಸಾಗಿದ್ದರು. ಮರುದಿನ ಬೆಳಗ್ಗೆ ದಲ್ಲಾಳಿ ಮಹಿಳೆಯನ್ನು ಹಿಡಿದು ಒತ್ತೆಯಾಳಾಗಿರಿಸಿ ಕ್ಯಾತೆ ತೆಗೆದಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.