ಕನ್ನಡಕ್ಕೂ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಬಿಡಿಸಲಾಗದ ನಂಟು. ಎಷ್ಟರ ಮಟ್ಟಿಗೆ ಎಂದರೇ ಮತ್ತೊಂದು ಜನ್ಮ ಇದ್ದರೇ ಅದು ಕನ್ನಡನಾಡಿನಲ್ಲಿ ಆಗಲಿ ಎಂದು ಎದೆ ತುಂಬಿ ಹೇಳುವಷ್ಟು.
ಎಸ್ಪಿಬಿ ಕನ್ನಡದಲ್ಲಿ ಗಾನಯಾನ ಆರಂಭಿಸಿದ್ದು ನಕ್ಕರೇ ಅದೇ ಸ್ವರ್ಗ ಚಿತ್ರದ ಕನಸಿದೋ ನನಸಿದೋ ಹಾಡಿನ ಮೂಲಕ. 1966ರಲ್ಲಿ ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮನ್ನ ಸಿನಿಮಾದಲ್ಲಿ ಮೊದಲ ಹಾಡು ಹಾಡಿದ ಬಳಿಕ ಎರಡನೇ ಹಾಡಿಗೆ ಧ್ವನಿಯಾಗಿದ್ದು ಕನ್ನಡದಲ್ಲಿಯೇ ಎಂಬುದು ವಿಶೇಷ.
ಕನ್ನಡದಲ್ಲಿ ಅವರು ಕೊನೆಯದಾಗಿ ಹಾಡಿದ್ದು ಇದೇ ಫೆಬ್ರವರಿಯಲ್ಲಿ. ಪಿಆರ್ಕೆ ಪ್ರೊಡಕ್ಷನ್ಸ್ನ ಮಾಯಾಬಜಾರ್-2016 ಚಿತ್ರದ ನಿಮಗೂ ಗೊತ್ತು ನಮಗೂ ಗೊತ್ತು. ಕಾಲ ಎಂದೋ ಎಕ್ಕುಟ್ಟಿ ಹೋಯ್ತು ಎಂಬ ಹಾಡಿಗೆ. ಈ ಹಾಡಿಗೆ ಅಪ್ಪು ಡ್ಯಾನ್ಸ್ ಮಾಡಿದ್ದರು. ಇದನ್ನೂ ಓದಿ: ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್ಪಿಬಿ ಹಾಡಿಗೆ ಪಟ್ಟು
ಈ ಅವಧಿಯಲ್ಲಿ 4 ಸಾವಿರಕ್ಕೂ ಹೆಚ್ಚು ಕನ್ನಡದ ಹಾಡುಗಳಿಗೆ ಎಸ್ಪಿಬಿ ಧ್ವನಿ ಆಗಿದ್ದರು. ಅನಂತನಾಗ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್ನಾಗ್, ರವಿಚಂದ್ರನ್ ಅವರ ಧ್ವನಿಗೆ ತಕ್ಕಂತೆ ಹಾಡುಗಳನ್ನು ಹಾಡುತ್ತಾ ಇದ್ದಿದ್ದು ಬಾಲುಗಾರು ವೈಶಿಷ್ಟ್ಯ. ಪಂಚಾಂಕ್ಷರಿ ಗವಾಯಿ ಸಿನಿಮಾದ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿತ್ತು.
ಕರುನಾಡಿನೊಂದಿಗೆ ಎಸ್ಪಿಬಿ ಅವರದ್ದು ಅವಿನಾಭಾವ ಸಂಬಂಧ. ಹಳೆ ಮೈಸೂರು ಸೀಮೆಯೇ ಆಗಲಿ. ಹುಬ್ಬಳಿ ಸೀಮೆ ಆಗಲಿ, ಕರಾವಳಿ ಭಾಗ ಆಗಲಿ.. ಹೀಗೆ ಎಲ್ಲಾ ಕಡೆಯೂ ಎಸ್ಪಿಬಿಗೆ ಓಡಾಡಿ ಗೊತ್ತು. ಕಿರುತೆರೆಯ ರಿಯಾಲಿಟಿ ಶೋ ಸಲುವಾಗಿ ಕರ್ನಾಟಕದ ಬಹುತೇಕ ಕಡೆ ಪ್ರೋಗ್ರಾಂಗಳನ್ನು ನೀಡಿದ್ರು. ಎಸ್ಪಿಬಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನ ಕಿಕ್ಕಿರಿದು ಸೇರುತ್ತಿದ್ರು. ಎಸ್ಪಿಬಿ ತಾವು ಭಾಗವಹಿಸ್ತಿದ್ದ ಕಾರ್ಯಕ್ರಮ, ಪ್ರಶಸ್ತಿ ಸಮಾರಂಭ, ಸಂದರ್ಶನಗಳಲ್ಲಿ ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಹೊಗಳದೇ ತಮ್ಮ ಮಾತುಗಳನ್ನು ನಿಲ್ಲಿಸ್ತಿರಲಿಲ್ಲ.
ತೆಲುಗು, ತಮಿಳು ಕಾರ್ಯಕ್ರಮದಲ್ಲೂ ಭಾಗಿಯಾದಾಗಲೂ ಕನ್ನಡವನ್ನು ಹಾಡಿ ಹೊಗಳ್ತಿದ್ದರು. ಕನ್ನಡ ಅಂದ್ರೆ ಎಸ್ಪಿಬಿಗೆ ಬಲು ಪ್ರೀತಿ. ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ 2016ರಲ್ಲಿ 22ನೇ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸುವ ವೇಳೆ, ಇನ್ನೊಂದು ಜನ್ಮವಿದ್ರೆ ಕರ್ನಾಟಕದಲ್ಲೇ ಹುಟ್ಟಲು ಬಯಸುತ್ತೇನೆ ಅಂತ ಹೇಳಿದ್ದರು. ಕನ್ನಡಿಗರು ಕೊಟ್ಟ ಪ್ರೀತಿ ಯಾರಿಂದಲೂ ಸಿಕ್ಕಿಲ್ಲ ಅಂತ ಹೇಳಿದ್ರು. 2018ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹಾಡಿದಾಗ ಒನ್ಸ್ಮೋರ್ ಎಂಬ ಕೂಗು ಹಬ್ಬಿತ್ತು. ಆಗ ಏತಕ್ಕಾಗಿ ನನ್ನನ್ನು ಇಷ್ಟೊಂದು ಪ್ರೀತಿಸ್ತೀರಾ..? ಮರಳಿ ನಿಮಗೇನು ಕೊಡಲಿ ನಾನು ಎನ್ನುತ್ತಾ ಭಾವುಕರಾಗಿದ್ದರು.