ಚೆನ್ನೈ: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಮಿಳುನಾಡು ಸರ್ಕಾರ ಆಗಸ್ಟ್ 9ರವರೆಗೆ ಲಾಕ್ಡೌನ್ ಮುಂದುವರಿಸಿದೆ.
ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್ಡೌನ್ ಜಾರಿಯಲ್ಲಿರಲಿದೆ. ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ:ಕೊರೊನಾ ಹೆಚ್ಚಾಗಲು ಜವಾಬ್ದಾರಿ ಸ್ಥಾನದಲ್ಲಿರುವವರೇ ಕಾರಣ: ಉಡುಪಿ ಡಿಸಿ
ಈಜುಕೊಳ, ಬಾರ್, ರೆಸ್ಟೋರೆಂಟ್, ಶಿಕ್ಷಣ ಸಂಸ್ಥೆ, ಮೃಗಾಲಯ, ಚಿತ್ರಮಂದಿರಗಳನ್ನು ತೆರೆಯಲು ನಿರಾಕರಿಸಲಾಗಿದ್ದು, ಪುದುಚೇರಿ ಹೊರತುಪಡಿಸಿ ಅಂತರರಾಜ್ಯ ಪ್ರಯಾಣವನ್ನು ಕೂಡ ನಿರ್ಬಂಧಿಸಲಾಗಿದೆ. ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ವಿವಾಹ ಮತ್ತಿತರ ಕಾರ್ಯಕ್ರಮಗಳಿಗೆ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಅಂತ್ಯಕ್ರಿಯೆ ವೇಳೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಸೂಚಿಸಿದೆ.
ಕಳೆದ ಎರಡು ತಿಂಗಳಿನಿಂದ ತಮಿಳುನಾಡಿನ 31 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ. ಆದರೆ ಎರಡು-ಮೂರು ದಿನಗಳಿಂದ ಈ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿದೆ. ಕಳೆದ ಬುಧವಾರ 1,756, ಗುರುವಾರ 1859, ಶುಕ್ರವಾರ 1,947 ಪ್ರಕರಣಗಳು ಪತ್ತೆಯಾಗಿದೆ. ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಕ್ರಮವನ್ನು ತಮಿಳುನಾಡು ಸರ್ಕಾರ ಮುಂದುವರಿಸಿದೆ. ಇದನ್ನೂ ಓದಿ:ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ